ನೇಪಾಳ-ಟಿಬೆಟ್ ಜಲಪ್ರಳಯ: ಸಾವಿನ ಸಂಖ್ಯೆ 584ಕ್ಕೆ ಏರಿಕೆ, 2,482 ಮಂದಿ ನಾಪತ್ತೆ, 320 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ
ನೇಪಾಳ ಮತ್ತು ಟಿಬೆಟ್ನಲ್ಲಿ ಸಂಭವಿಸಿದ ಭೀಕರ ಭೋಟೆಕೋಶಿ-ತ್ರಿಶೂಲಿ ಪ್ರಕೃತಿ ವಿಕೋಪದಿಂದಾಗಿ 584 ಮಂದಿ ಮೃತಪಟ್ಟು, 2,482ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ದುರಂತದಲ್ಲಿ 320ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಸಂಪರ್ಕ ಕಳೆದುಕೊಂಡಿದ್ದಾರೆ. ಜಲವಿದ್ಯುತ್ ಯೋಜನೆಯ 400ಕ್ಕೂ ಹೆಚ್ಚು ಸಿಬ್ಬಂದಿ ಸುರಂಗದಲ್ಲಿ ಸಿಲುಕಿಕೊಂಡಿದ್ದು, ಆಹಾರ ಮತ್ತು ನೀರಿಲ್ಲದೆ ಪರದಾಡುತ್ತಿದ್ದಾರೆ. ಪ್ರವಾಹ ಮತ್ತು ಹಿಮಪಾತದ ಭೀತಿ ಮುಂದುವರಿದಿದೆ.

ಕಠ್ಮಂಡು, ಆ.29: ಭೋಟೆಕೋಶಿ-ತ್ರಿಶೂಲಿ ನದಿ ಪಾತ್ರದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಿಂದಾಗಿ (Bhote Koshi-Trishuli Disaster) ನೇಪಾಳ ಮತ್ತು ಟಿಬೆಟ್ ಭಾಗಗಳಲ್ಲಿ ಹಾಹಾಕಾರ ಮುಂದುವರಿದಿದೆ. ಶುಕ್ರವಾರ ಸಂಜೆಯ ವೇಳೆಗೆ ಮೃತರ ಸಂಖ್ಯೆ ಬರೋಬ್ಬರಿ 584ಕ್ಕೆ ಏರಿಕೆಯಾಗಿದ್ದು, 2,482ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ನೇಪಾಳವೊಂದರಲ್ಲೇ 579 ಮಂದಿ ಮೃತಪಟ್ಟು 1,924 ಜನರು ನಾಪತ್ತೆಯಾಗಿದ್ದರೆ, ಟಿಬೆಟ್ನಲ್ಲಿ 5 ಜನರು ಮೃತಪಟ್ಟು 558 ಮಂದಿ ಕಣ್ಮರೆಯಾಗಿದ್ದಾರೆ. ಹಲವು ಗ್ರಾಮೀಣ ಪ್ರದೇಶಗಳು ಹಾಗೂ ವಿದ್ಯುತ್ ಯೋಜನೆಗಳ ಕೇಂದ್ರಗಳು ಸಂಪರ್ಕ ಕಡಿತಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿಯಿದೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ (MEA) ವಕ್ತಾರ ರಂಧೀರ್ ಜೈಸ್ವಾಲ್ ಶುಕ್ರವಾರ ನೀಡಿರುವ ಮಾಹಿತಿಯಂತೆ, ನೇಪಾಳದಲ್ಲಿರುವ 320 ಭಾರತೀಯ ಪ್ರವಾಸಿಗರು/ನಾಗರಿಕರು ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಸಂಖ್ಯೆ ಮೊದಲು 290 ಇತ್ತು. ವಿದೇಶಿ ಪೌರತ್ವ ಹೊಂದಿರುವ ಸುಮಾರು 100 ಭಾರತೀಯ ಮೂಲದವರೂ ಸಂಪರ್ಕದಿಂದ ಹೊರಗಿದ್ದಾರೆ.
ಕಠ್ಮಂಡುವಿಗೆ ಕರೆತರಲಾಗಿದ್ದ ತಮಿಳುನಾಡಿನ 21 ಭಾರತೀಯ ಯಾತ್ರಿಕರು ಶುಕ್ರವಾರ ದೆಹಲಿಗೆ ಸುರಕ್ಷಿತವಾಗಿ ತಲುಪಿದ್ದಾರೆ. ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 63 ಭಾರತೀಯರನ್ನು ರಕ್ಷಿಸಲಾಗಿದೆ. ಟಿಬೆಟ್ನಿಂದ 149 ಭಾರತೀಯರು ನೇಪಾಳ ಗಡಿಗೆ ದಾಟಿದ್ದಾರೆ. ಚೀನಾ ಭಾಗದಲ್ಲಿ ಇನ್ನು 400ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿದ್ದಾರೆ.
ಮತ್ತೆ ಉಂಟಾದ ಪ್ರವಾಹ ಭೀತಿ ಮತ್ತು ಹಿಮಪಾತ!
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ಪಡೆಗಳಿಗೆ ನದಿ ಪಾತ್ರದ ತಾತ್ಕಾಲಿಕ ಹಿಮದ ಕಟ್ಟೆ (Barrier Lake) ಒಡೆದು ನೀರು ನುಗ್ಗಿದ್ದರಿಂದ ಶುಕ್ರವಾರ ಹಲವು ಬಾರಿ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಇದರ ಬೆನ್ನಲ್ಲೇ ಸುಮಾರು 50,000 ಕ್ಯೂಬಿಕ್ ಮೀಟರ್ನಷ್ಟು ಬೃಹತ್ ಹಿಮಪಾತ (Avalanche) ಸಂಭವಿಸಿದೆ. ಉಪಗ್ರಹ ಚಿತ್ರಗಳ ಪ್ರಕಾರ ಮೇಲ್ಭಾಗದಲ್ಲಿ ಯಾವುದೇ ಹರಿವಿಲ್ಲದ ಎರಡನೇ ಬೃಹತ್ ಸರೋವರ ರೂಪುಗೊಳ್ಳುತ್ತಿದ್ದು, ಮತ್ತಷ್ಟು ಅನಾಹುತದ ಮುನ್ಸೂಚನೆ ನೀಡಿದೆ.
ಟನಲ್ನೊಳಗೆ ಸಿಲುಕಿದ ನೂರಾರು ಜಲವಿದ್ಯುತ್ ಯೋಜನೆಯ ಸಿಬ್ಬಂದಿ
ನೇಪಾಳದ ವಿವಿಧ ಜಲವಿದ್ಯುತ್ ಯೋಜನೆಗಳಿಗೆ ಸೇರಿದ ಸುಮಾರು 933 ಸಿಬ್ಬಂದಿ ಕಣ್ಮರೆಯಾಗಿದ್ದಾರೆ. ಕೋರಿಯಾ ಅನುದಾನಿತ 216 ಮೆಗಾವ್ಯಾಟ್ ಸಾಮರ್ಥ್ಯದ ‘ಅಪ್ಪರ್ ತ್ರಿಶೂಲಿ-1’ ಯೋಜನೆಯ 10 ಕಿ.ಮೀ ಉದ್ದದ ಸುರಂಗ ಮಾರ್ಗದೊಳಗೆ 400ಕ್ಕೂ ಹೆಚ್ಚು ಕಾರ್ಮಿಕರು ಆಶ್ರಯ ಪಡೆದುಕೊಂಡಿದ್ದು, ಸುರಂಗದ ದಾರಿಗಳು ಕೆಸರು ಮತ್ತು ತ್ಯಾಜ್ಯದಿಂದ ಬಂದ್ ಆಗಿವೆ. ಸುರಂಗದ ಒಳಗಿರುವವರಿಗೆ ಆಮ್ಲಜನಕದ ಕೊರತೆಯಿಲ್ಲವಾದರೂ, ಆಹಾರ ಮತ್ತು ನೀರಿನ ತೀವ್ರ ಅಭಾವ ಎದುರಾಗಿದೆ. ಸಮಯಕ್ಕೆ ಸರಿಯಾಗಿ ರಕ್ಷಿಸಿದರೆ ಅವರು ಜೀವಂತವಾಗಿ ಉಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯಲ್ಲಿ ಭಾಗಿಯಾಗಿದ್ದ 40 ಭಾರತೀಯರು ಹಾಗೂ 8 ಕೊರಿಯನ್ನರು ನಾಪತ್ತೆಯಾಗಿದ್ದಾರೆ.
ಟಿಬೆಟ್ನಲ್ಲಿ 555 ಪ್ರವಾಸಿಗರ ಸ್ಥಳಾಂತರ
ಚೀನಾದ ಟಿಬೆಟ್ ಭಾಗದ ಗೈರಾಂಗ್ ಕೌಂಟಿಯಲ್ಲಿ 5 ಸಾವು ವರದಿಯಾಗಿದ್ದು, 260 ವಿದೇಶಿಯರು ಸೇರಿ 558 ಮಂದಿ ನಾಪತ್ತೆಯಾಗಿದ್ದಾರೆ. ಚೀನಾ ಸರ್ಕಾರವು ಗೈರಾಂಗ್ ಪ್ರದೇಶದಲ್ಲಿದ್ದ 555 ಪ್ರವಾಸಿಗರನ್ನು ಹಾಗೂ ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




