AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2024: 5 ಕೆಜಿ ಉಚಿತ ಪಡಿತರ ಗಡುವು 5 ವರ್ಷ ವಿಸ್ತರಣೆ, ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣು

ಕೇಂದ್ರ ಸರ್ಕಾರದ ಅಂಕಿಅಂಶ ಪ್ರಕಾರ, ಮಹಾರಾಷ್ಟ್ರದಲ್ಲಿ 25 ಲಕ್ಷ ಕುಟುಂಬಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅಡಿಯಲ್ಲಿ ಒದಗಿಸಲಾಗುವ ಈ ಪಡಿತರ ಯೋಜನೆಯ ಫಲಾನುಭವಿಗಳಾಗಿವೆ. ಅದೇ ರೀತಿ ಜಾರ್ಖಂಡ್‌ನಲ್ಲಿ 8.94 ಲಕ್ಷ ಕುಟುಂಬಗಳು ಈ ಯೋಜನೆಯಡಿ ಪಡಿತರ ಪಡೆಯುತ್ತಿದ್ದಾರೆ. ಹರಿಯಾಣದಲ್ಲಿ 2.68 ಲಕ್ಷ ಕುಟುಂಬಗಳು ಇದರ ಫಲಾನುಭವಿಗಳಾಗಿದ್ದಾರೆ.

Budget 2024: 5 ಕೆಜಿ ಉಚಿತ ಪಡಿತರ ಗಡುವು 5 ವರ್ಷ ವಿಸ್ತರಣೆ, ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣು
ನಿರ್ಮಲಾ ಸೀತಾರಾಮನ್ ಬಜೆಟ್
Ganapathi Sharma
|

Updated on: Jul 23, 2024 | 1:21 PM

Share

ನವದೆಹಲಿ, ಜುಲೈ 23: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅಡಿಯಲ್ಲಿ ನೀಡಲಾಗುತ್ತಿರುವ 5 ಕೆಜಿ ಉಚಿತ ಆಹಾರ ಧಾನ್ಯಗಳ ವಿತರಣೆಯ ಗಡುವನ್ನು 5 ವರ್ಷಗಳವರೆಗೆ ವಿಸ್ತರಣೆ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ಈ ಘೋಷಣೆಯನ್ನು ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು 3 ತಿಂಗಳ ನಂತರ ಈ ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. 3 ರಾಜ್ಯಗಳಲ್ಲಿ 2 (ಮಹಾರಾಷ್ಟ್ರ ಮತ್ತು ಹರಿಯಾಣ) ಪ್ರಸ್ತುತ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದ್ದರೆ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದೆ.

ಉಚಿತ ಧಾನ್ಯ ವಿತರಣೆ ವಿಸ್ತರಣೆ ಏಕೆ?

ಚುನಾವಣೆ ನಡೆಯುವ ಮೂರೂ ರಾಜ್ಯಗಳಲ್ಲಿ 35 ಲಕ್ಷಕ್ಕೂ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಫಲಾನುಭವಿಗಳನ್ನು ಸಂಖ್ಯಾತ್ಮಕವಾಗಿ ನೋಡಿದರೆ ಸುಮಾರು 1.59 ಕೋಟಿ ಇದ್ದಾರೆ. ಭಾರತ ಸರ್ಕಾರದ ಪ್ರಕಾರ, ಮಹಾರಾಷ್ಟ್ರದಲ್ಲಿ 1 ಕೋಟಿ 10 ಲಕ್ಷ ಜನರು ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಾರೆ. ಜಾರ್ಖಂಡ್‌ನಲ್ಲಿ ಈ ಸಂಖ್ಯೆ ಸುಮಾರು 34 ಲಕ್ಷ. ಹರಿಯಾಣದಲ್ಲಿ ಪಡಿತರ ಪ್ರಯೋಜನ ಪಡೆಯುವವರ ಸಂಖ್ಯೆ ಸುಮಾರು 12 ಲಕ್ಷ.

ಗುಜರಾತ್​​​ನಲ್ಲಿ ಲಾಭ ಪಡೆದಿರುವ ಬಿಜೆಪಿ

ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉಚಿತ ಪಡಿತರ ಯೋಜನೆಯ ಲಾಭ ಸಿಕ್ಕಿದೆ. ಇವುಗಳಲ್ಲಿ ಗುಜರಾತ್ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳು ಪ್ರಮುಖವಾಗಿವೆ. ಸಿಎಸ್​ಡಿಎಸ್ ಸಮೀಕ್ಷೆ ಪ್ರಕಾರ, ಗುಜರಾತ್‌ನಲ್ಲಿ ಮತ ಚಲಾಯಿಸಲು ಬಂದ 10 ಜನರಲ್ಲಿ 7 ಜನರು ಉಚಿತ ಆಹಾರ ಧಾನ್ಯ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಈ ಬಾರಿಯ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಏಕಪಕ್ಷೀಯವಾಗಿ ಗೆಲುವು ಸಾಧಿಸಿತ್ತು.

ಉತ್ತರ ಪ್ರದೇಶದಲ್ಲೂ ಭಾರತೀಯ ಜನತಾ ಪಕ್ಷವು ಉಚಿತ ಆಹಾರ ಧಾನ್ಯಗಳ ಯೋಜನೆಯ ಲಾಭವನ್ನು ಪಡೆದುಕೊಂಡಿದೆ. ಸಮೀಕ್ಷೆ ಏಜೆನ್ಸಿ ಪ್ರಕಾರ, ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ, ಶೇ 67 ರಷ್ಟು ಜನರು ತಮ್ಮ ಕುಟುಂಬವು ಈ ಉಚಿತ ಪಡಿತರ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಉಚಿತ ಧಾನ್ಯ ವಿತರಣೆಗೆ ಎಷ್ಟು ಖರ್ಚಾಗುತ್ತದೆ?

ಹಣಕಾಸು ಸಚಿವಾಲಯದ ಪ್ರಕಾರ, 2020 ರಲ್ಲಿ ಈ ಯೋಜನೆಗೆ ಗರಿಷ್ಠ 5.41 ಲಕ್ಷ ಕೋಟಿ ರೂ. ಖರ್ಚಾಗಿದೆ. ಇದು 2021 ರಲ್ಲಿ 2.92 ಲಕ್ಷ ಕೋಟಿ ರೂ, 2022 ರಲ್ಲಿ 2.72 ಲಕ್ಷ ಕೋಟಿ ರೂ, 2023 ರಲ್ಲಿ 2.12 ಲಕ್ಷ ಕೋಟಿ ರೂ. ಮತ್ತು 2023 ರಲ್ಲಿ 2.05 ಲಕ್ಷ ಕೋಟಿ ರೂ. ಆಗಿದೆ.

ಕೇಂದ್ರ ಸರ್ಕಾರದ ಪ್ರಕಾರ, ದೇಶಾದ್ಯಂತ ಸುಮಾರು 80 ಕೋಟಿ ಜನರು ಈ ಯೋಜನೆಯ ಲಾಭ ಪಡೆಯುತ್ತಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಬಜೆಟ್ ಮೇಲೆ ಹೊರೆ ಎಂದು ಪರಿಗಣಿಸಿದ್ದಾರೆ ಮತ್ತು ಐದು ವರ್ಷಗಳ ಅವಧಿಯಲ್ಲಿ ಸುಮಾರು 10 ಲಕ್ಷ ಕೋಟಿ ರೂ. ಖರ್ಚು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: 5 ವರ್ಷಗಳಲ್ಲಿ ಟಾಪ್-500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್​ಗೆ ಅವಕಾಶ

ಅಷ್ಟೇ ಅಲ್ಲದೆ, ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ನೀತಿ ಆಯೋಗ ಸಲಹೆ ನೀಡಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿದೆ. ಆದರೆ, ಆಯೋಗದ ಈ ಸಲಹೆಯನ್ನು ಸರ್ಕಾರ ಸ್ವೀಕರಿಸಲಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ