ನನ್ನನ್ನೇಕೆ ಬಲಿಪಶು ಮಾಡಿದ್ರಿ ಎಂದ ತಮಿಳು ನಟನಿಗೆ ನೇರವಾಗಿ ಉತ್ತರಿಸಿದ ರಚಿತಾ ರಾಮ್
ರಚಿತಾ ರಾಮ್ ಅವರು ತಮಿಳು ಚಿತ್ರ 'ಕೂಲಿ'ಯಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಸಂಬಂಧಿಸಿದಂತೆ ಸಹ ನಟನ ಪ್ರಶ್ನೆಗೆ ಸಖತ್ ಉತ್ತರ ನೀಡಿದ್ದಾರೆ. ನಟ ಕಣ್ಣ ರವಿ ಅವರು ಸೋಶಿಯಲ್ ಮೀಡಿಯಾದಲ್ಲಿ ರಚಿತಾ ಅವರೊಂದಿಗೆ ಫೋಟೋ ಹಾಕಿ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ರಚಿತಾ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ರಚಿತಾ ರಾಮ್ (Rachita Ram) ಅವರು ತಮ್ಮ ಬಗ್ಗೆ ಯಾವುದೇ ವಿವಾದ ಎದುರಾದರೂ ಅದಕ್ಕೆ ನೇರವಾಗಿ ಉತ್ತರ ನಿಡುತ್ತಾರೆ. ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ವಿವಾದ ಬಂದಾಗ ಬಚ್ಚಿಟ್ಟು ಕುಳಿತವರೇ ಅಲ್ಲ. ಈಗ ತಮಿಳು ನಟನೋರ್ವ ‘ನಾನೇ ಏಕೆ’ ಎಂದು ಕೇಳಿದ್ದಾರೆ. ಇದಕ್ಕೆ ರಚಿತಾ ರಾಮ್ ನೇರವಾಗಿ ಉತ್ತರಿಸಿದ್ದಾರೆ. ಅಷ್ಟಕ್ಕೂ ಏನಿದು ವಿವಾದ? ಅಸಲಿಗೆ ಇದು ವಿವಾದ ಅಲ್ಲ. ಇದರ ಹಿನ್ನೆಲೆ ಗೊತ್ತಾಗಬೇಕು ಎಂದರೆ ‘ಕೂಲಿ’ ಸಿನಿಮಾ ನೋಡಿರಬೇಕು. ಒಂದೊಮ್ಮೆ ‘ಕೂಲಿ’ ನೋಡದೇ ಈ ಸುದ್ದಿ ಓದಿದಿರಿ ಎಂದಾದರೆ ಕಥೆಯ ಗುಟ್ಟು ರಟ್ಟಾಗುವ ಸಾಧ್ಯತೆ ಇದೆ ಎಚ್ಚರ.
ಲೋಕೇಶ್ ಕನಗರಾಜ್ ನಿರ್ದೇಶನದ, ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಯಿತು. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಕಲ್ಯಾಣಿ ಹೆಸರಿನ ಪಾತ್ರ ಮಾಡಿದ್ದಾರೆ. ತಮಿಳು ನಟ ಕಣ್ಣ ರವಿ ಅವರು ಅರ್ಜುನ್ ಸೈಮನ್ ಹೆಸರಿನ ಪಾತ್ರ ಮಾಡಿದ್ದಾರೆ. ಎರಡೂ ಪಾತ್ರಗಳು ಸಿನಿಮಾದಲ್ಲಿ ಪ್ರಾಮುಖ್ಯತೆ ವಹಿಸಿದೆ. ಸೈಮನ್ ಮಗ ಅರ್ಜುನ್, ಕಲ್ಯಾಣಿಯನ್ನು ಪ್ರೀತಿಸುತ್ತಾ ಇರುತ್ತಾನೆ. ಆದರೆ, ಕಲ್ಯಾಣಿಯು ಅರ್ಜುನ್ಗೆ ಮೋಸ ಮಾಡುತ್ತಾಳೆ. ಅಷ್ಟೇ ಅಲ್ಲ, ಆತನನ್ನು ಸಾಯಿಸಿಯೂ ಬಿಡುತ್ತಾಳೆ.
ಕಣ್ಣ ರವಿ ಪೋಸ್ಟ್
View this post on Instagram
ಈ ವಿಚಾರವನ್ನೇ ಇಟ್ಟುಕೊಂಡು, ರವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ರಚಿತಾ ರಾಮ್ ಜೊತೆ ನಿಂತಿರೋ ಪೋಟೋನ ಪೋಸ್ಟ್ ಮಾಡಿರೋ ಅವರು, ‘ಏಕೆ ಕಲ್ಯಾಣಿ, ನಾನೇ ಏಕೆ’ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನನ್ನು ಏಕೆ ಬಲಿಪಶು ಮಾಡಬೇಕಿತ್ತು ಎಂಬುದು ಇದರ ಅರ್ಥ.
ಇದನ್ನೂ ಓದಿ: ಕೂಲಿ ಸಿನಿಮಾದಲ್ಲಿ ಮಿಂಚಿದ ರಚಿತಾ ರಾಮ್: ಸಿಕ್ತು ಮೆಚ್ಚುಗೆ
ಇದಕ್ಕೆ ರಚಿತಾ ರಾಮ್ ಕಾಮೆಂಟ್ ಬಾಕ್ಸ್ನಲ್ಲಿ ನೇರವಾಗಿ ಉತ್ತರಿಸಿದ್ದಾರೆ. ಅವರ ಉತ್ತರದಲ್ಲಿ ಒಂದು ಫನ್ ಇತ್ತು. ‘ಅರ್ಜುನ್ (ಕೂಲಿ ಪಾತ್ರದ ಹೆಸರು) ನಾನು ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಸ್ಕ್ರಿಪ್ಟ್ನ ಫಾಲೋ ಮಾಡಿದ್ದೇನೆ. ನನ್ನ ಕ್ರೇಜಿ ನಡವಳಿಕೆಗೆ ನಮ್ಮ ಬಾಸ್ನ ದೂಷಿಸಿ’ ಎಂದು ರಚಿತಾ ಹೇಳಿದ್ದಾರೆ. ಸದ್ಯ ಈ ಕಮೆಂಟ್ ವೈರಲ್ ಆಗಿದೆ. ಈ ಕಮೆಂಟ್ಗೆ ಸುಮಾರು 10 ಸಾವಿರ ಲೈಕ್ಸ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Fri, 29 August 25








