ಹಿಂದೂಗಳ ಮನೆಗೆ ಭೇಟಿ: ಮಂಗಳೂರು ಪೊಲೀಸರ ವಿರುದ್ಧ ತನಿಖೆಗೆ ಮಾನವ ಹಕ್ಕುಗಳ ಆಯೋಗ ಆದೇಶ
ದಕ್ಷಿಣ ಕನ್ನಡದಲ್ಲಿ ನಡೆದ ಸರಣಿ ಹತ್ಯೆಗಳು ನಡೆದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಪೊಲೀಸರು ಆರ್ಎಸ್ಎಸ್ ಮತ್ತು ಸಂಘ ಪರಿವಾರದ ಮುಖಂಡರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದರು. ಹೀಗಾಗಿ, ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ದೂರು ಪಡೆದ ಎನ್ ಹೆಚ್ಆರ್ಸಿ ತನಿಖೆ ಆದೇಶ ನೀಡಿದೆ.

ಮಂಗಳೂರು, ಜೂನ್ 17: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿನ ಹಿಂದೂ ಕಾರ್ಯಕರ್ತರ (Hindu Activist) ಮನೆಗಳಿಗೆ ರಾತ್ರೊರಾತ್ರಿ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕುರಿತು ಸಮಗ್ರ ತನಿಖೆ ನಡೆಸಿ, ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ತನಿಖಾ ವಿಭಾಗದ ಡಿಜಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ (National Human Rights Commission) ಆದೇಶ ಮಾಡಿದೆ. ಹಿಂದೂ ಕಾರ್ಯರ್ತರ ಮನೆಗಳಿಗೆ ಪೊಲೀಸರು ಭೇಟಿ ನೀಡುತ್ತಿದ್ದ ವಿಚಾರವಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ತನಿಖಾ ವಿಭಾಗದ ಡಿಜಿಗೆ ಸೂಚನೆ ನೀಡಿದೆ. ಸ್ಥಳ ಪರಿಶೀಲನೆ, ಪೊಲೀಸರ ದಾಖಲೆ ಪರಿಶೀಲನೆ ಮತ್ತು ಎಲ್ಲ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ನೀಡಿದೆ.
ಭರತ್ ಶೆಟ್ಟಿ ದೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸಾರ್ವಜನಿಕರು, ಸಮಾಜ ಸೇವಕರು ಮತ್ತು ಒಂದು ಸಮುದಾಯದ ಸಂಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಮನೆಗಳಿಗೆ ಪೊಲೀಸರು ಯಾವುದೇ ಅಪರಾಧದ ಹಿನ್ನೆಲೆ, ಎಫ್ಐಆರ್, ವಾರೆಂಟ್ ಅಥವಾ ಕಾನೂನು ದಾಖಲೆ ನೀಡದೆ ಕಾನೂನು ಬಾಹಿರವಾಗಿ ರಾತ್ರಿ 11 ಗಂಟೆ ನಂತರ ಭೇಟಿ ನೀಡುತ್ತಿದ್ದಾರೆ. ಇದರಿಂದ ಕಾನೂನುಬದ್ಧ ವ್ಯಕ್ತಿಗಳಿಗೆ ತೊಂದರೆಯಾಗುತ್ತಿದೆ. ಪೊಲೀಸರು ಮನೆಗಳಿಗೆ ಹೋಗಿ ಛಾಯಾಚಿತ್ರ ತೆಗೆದು, GPS ಸ್ಥಳ ಮಾಹಿತಿ ಸಂಗ್ರಹಿಸಿ, ಪ್ರಶ್ನೆ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವಿರುದ್ಧ ಶಾಸಕ ಭರತ್ ಶೆಟ್ಟಿ ದೂರು ನೀಡಿದ್ದರು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸ್ ಭೇಟಿ: ದೊಡ್ಡ ಮಟ್ಟದ ಪ್ರತಿಭಟನೆಯ ಎಚ್ಚರಿಕೆ, ವಿಹೆಚ್ಪಿ
ಭರತ್ ಶೆಟ್ಟಿ ಮನೆಗೆ ಅಧಿಕಾರಿಗಳು ಭೇಟಿ
ಆದೇಶದ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತನಿಖಾ ವಿಭಾಗದ ಅಧಿಕಾರಿಗಳು ಶಾಸಕ, ದೂರುದಾರ ಡಾ.ವೈ.ಭರತ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಹೇಳಿಕೆ ಪಡೆದರು. ದೂರಿನ ಬಗ್ಗೆ ಸಂಪೂರ್ಣ ವಿವರಣೆ ಪಡೆದುಕೊಂಡರು.
ದಕ್ಷಿಣ ಕನ್ನಡದಲ್ಲಿ ನಡೆದ ಸರಣಿ ಹತ್ಯೆಗಳು ನಡೆದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಪೊಲೀಸರು ಆರ್ಎಸ್ಎಸ್ ಮತ್ತು ಸಂಘ ಪರಿವಾರದ ಮುಖಂಡರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದರು. ಇದಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Tue, 17 June 25







