KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪರಿಂದ ಮತ್ತೊಂದು ಅಕ್ರಮ? ನಕಲಿ ದಾಖಲೆ ಸೃಷ್ಟಿಸಿ 27 ಎಕರೆ ಭೂಮಿ ಗುಳುಂ?
ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಹೈಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಮಾಜಿ ಅಧ್ಯಕ್ಷ ಶಿವಶಂಕರಪ್ಪಗೆ ಬಂಧನದ ಭೀತಿ ಎದುರಾಗಿದೆ. ಮತ್ತೊಂದೆಡೆ ಅಳಿಯನ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸಿ 27 ಎಕರೆ ಭೂಮಿ ಕಬಳಿಸಿದ ಆರೋಪವೂ ಸಾಹುಕಾರ್ ಕೊರಳಿಗೆ ಸುತ್ತಿಕೊಂಡಿದ್ದು, ಅವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಲಬುರಗಿ, ಸೆಪ್ಟೆಂಬರ್ 08: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ನಡೆಸಿರುವ ಒಂದೊಂದೇ ಅಕ್ರಮಗಳು ಬಯಲಾಗುತ್ತಿದ್ದು, ಅಳಿಯನ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸಿ ಕಂಡವರ ಜಮೀನಿಗೆ ಕನ್ನ ಹಾಕಿದ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿ ಅಳಿಯ ಶಂಕರಗೌಡ ಮೂಲಕ ಸರ್ವೆ ನಂಬರ್ 242, 245ರಲ್ಲಿರುವ 27 ಎಕರೆ ಭೂಕಬಳಿಕೆ ಬಗ್ಗೆ ದೂರಲಾಗಿದೆ. ಭೂಮಾಲಕಿ ಬಸಮ್ಮ ಪುತ್ರ ಎಂದು ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ ನಡೆಸಲಾಗಿದೆ. ಮೊದಲಿಗೆ ಅಳಿಯನ ಹೆಸರಿಗೆ ಭೂಮಿ ನೋಂದಣಿ ಮಾಡಿಸಿ ನಂತರ ತನ್ನ ಹೆಸರಿಗೆ ಶಿವಶಂಕರಪ್ಪ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಭೂಮಾಲಕಿ ಬಸಮ್ಮ ಕುಟುಂಬ ಶಹಾಪುರ ಠಾಣೆಗೆ ದೂರು ನೀಡಿದೆ. ಭೂಮಿ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಶಂಕರಪ್ಪ ಸಾಹುಕಾರ್ ಅಳಿಯ ಶಂಕರಗೌಡ, ನಾನು ಭೂಮಾಲಕಿ ಬಸಮ್ಮ ದತ್ತು ಪುತ್ರ. ಬಸಮ್ಮ ಸತ್ತ ಮೇಲೆ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನಾನೂ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಅಣಬಿ ಗ್ರಾಮದವೇನೆ. ಒಂದೇ ಊರಿನಲ್ಲಿ ಬಸಮ್ಮ ನಮ್ಮ ಜೊತೆಗೆ ಇದ್ದರು ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಶಿವಶಂಕರಪ್ಪ ಅವರನ್ನು ಸಂಪರ್ಕಿಸಲು ಟಿವಿ9 ಯತ್ನಿಸಿತ್ತಾದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಅವರಿಂದ ಪ್ರಕರಣದ ಬಗ್ಗೆ ಈ ವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ.
ಶಿವಶಂಕರಪ್ಪ ಸಾಹುಕಾರ್ಗೆ ಬಂಧನ ಭೀತಿ
ಮತ್ತೊಂದೆಡೆ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ಗೆ ಬಂಧನದ ಭೀತಿ ಎದುರಾಗಿದೆ. ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ಸಿಐಡಿ ಮೂರನೇ ನೋಟಿಸ್ ಸಂಬಂಧ ಶಿವಶಂಕರಪ್ಪ ವಿಚಾರಣೆಗೆ ಗೈರಾಗಿದ್ದು, ನಿನ್ನೆ ಹೈಕೋರ್ಟ್ ಶಿವಶಂಕರಪ್ಪಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಸಾಹುಕಾರ್ ಮನೆ ಮೇಲೆ ದಾಳಿ ಮಾಡಿದ್ದರು. ಆದರೆ ಸಿಐಡಿ ವಿಚಾರಣೆಗೆ ಹಾಜರಾಗದ ಶಿವಶಂಕರಪ್ಪ ಮನೆಯಲ್ಲೂ ಇಲ್ಲದಿರೋದು ಆ ವೇಳೆ ಗೊತ್ತಾಗಿತ್ತು.
ಇದನ್ನೂ ಓದಿ: ಇದು ವ್ಯವಸ್ಥಿತ ಫ್ರಾಡ್: ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪಗೆ ಹೈಕೋರ್ಟ್ ಬಿಗ್ ಶಾಕ್
ನೀಟ್ ಪರೀಕ್ಷೆ ಅಕ್ರಮದಿಂದ ಕೆಲ ವಿದ್ಯಾರ್ಥಿಗಳೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ಇತ್ತೀಚೆಗೆ ಭಾರೀ ಪ್ರತಿಭಟನೆ ನಡೆದಿದೆ. ಹೀಗಾದರೆ ರಾತ್ರಿ ಹಗಲು ಓದಿದವರ ಕಥೆ ಏನಾಗಬೇಕು? ಕೆಪಿಎಸ್ಸಿ ಮೇಲಿನ ಜನರ ವಿಶ್ವಾಸವೇ ನಾಶವಾಗಿದೆ. ನಿಮ್ಮ ಕುಟುಂಬದ ಸದಸ್ಯರೇ ಇದರಲ್ಲಿ ಭಾಗಿಯಾಗಿದ್ದಾರೆ. ಇದು ವ್ಯವಸ್ಥಿತ ಫ್ರಾಡ್ ಎಂದು ಶಿವಶಂಕರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರು, ಜಾಮೀನು ಅರ್ಜಿಯನ್ನು ವಜಾ ಮಾಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:25 pm, Tue, 8 September 26




