AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಿನ್ನಾಭಿಪ್ರಾಯಗಳು ವಿವಾದವಾಗಬಾರದು’; ಮುರಿದ ಬಾಂಧವ್ಯ ಸರಿಪಡಿಸಲು ಪ್ರಧಾನಿ ಮೋದಿ-ಕ್ಸಿ ಜಿನ್‌ಪಿಂಗ್ ಸುದೀರ್ಘ ಮಾತುಕತೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಚೀನಾ ಗಣರಾಜ್ಯದ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಆಗಸ್ಟ್ ತಿಂಗಳಲ್ಲಿ ತಿಯಾಂಜಿನ್‌ನಲ್ಲಿ ನಡೆದ ಕೊನೆಯ ಭೇಟಿಯ ನಂತರ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳಲ್ಲಿ ಕಂಡುಬಂದ ನಿರಂತರ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು. ಎರಡೂ ದೇಶಗಳು ತಮ್ಮ ನಂಟನ್ನು ಕಾರ್ಯತಂತ್ರದ ಮತ್ತು ದೀರ್ಘಕಾಲೀನ ದೃಷ್ಟಿಕೋನದಿಂದ ನೋಡಬೇಕು ಎಂದು ಅವರು ಪುನರುಚ್ಚರಿಸಿದರು.

'ಭಿನ್ನಾಭಿಪ್ರಾಯಗಳು ವಿವಾದವಾಗಬಾರದು'; ಮುರಿದ ಬಾಂಧವ್ಯ ಸರಿಪಡಿಸಲು ಪ್ರಧಾನಿ ಮೋದಿ-ಕ್ಸಿ ಜಿನ್‌ಪಿಂಗ್ ಸುದೀರ್ಘ ಮಾತುಕತೆ!
China Presidnet And Pm ModiImage Credit source: AP
ಸುಷ್ಮಾ ಚಕ್ರೆ
|

Updated on:Sep 12, 2026 | 9:07 PM

Share

ನವದೆಹಲಿ, ಸೆಪ್ಟೆಂಬರ್ 12: ಗಡಿ ವಿವಾದಗಳ ನಡುವೆಯೂ ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸುವ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನವದೆಹಲಿಯ ‘ಭಾರತ ಮಂಟಪ’ದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯ ವೇಳೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಸುಮಾರು 50 ನಿಮಿಷಗಳ ಕಾಲ ನಡೆದ ಈ ಸುದೀರ್ಘ ಸಭೆಯು ಉಭಯ ದೇಶಗಳ ನಂಟಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ. ಕಳೆದ 1 ವರ್ಷದಲ್ಲಿ ಉಭಯ ನಾಯಕರ ನಡುವೆ ನಡೆದ ಎರಡನೇ ಭೇಟಿ ಇದಾಗಿದೆ. ಇದಕ್ಕೂ ಮುನ್ನ, ಆಗಸ್ಟ್ 31ರಂದು ಚೀನಾದ ತಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ಶೃಂಗಸಭೆಯ ವೇಳೆ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದರು.

ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ನಿರಂತರ ಸುಧಾರಣೆಯತ್ತ ಸಾಗುತ್ತಿರುವ ಸೂಚನೆಗಳ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳುವುದನ್ನು ತಮ್ಮ ದ್ವಿಪಕ್ಷೀಯ ಮಾತುಕತೆಯ ಕೇಂದ್ರಬಿಂದುವನ್ನಾಗಿ ಮಾಡಿದ್ದಾರೆ. ದ್ವಿಪಕ್ಷೀಯ ನಂಟಿನ ನಿರಂತರ ಪ್ರಗತಿಗೆ ಗಡಿ ಶಾಂತಿಯೇ ತಳಹದಿ ಎಂದು ಉಭಯ ನಾಯಕರು ಪ್ರತಿಪಾದಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಅತ್ಯಗತ್ಯ:

ದ್ವಿಪಕ್ಷೀಯ ಬಾಂಧವ್ಯದ ಅಭಿವೃದ್ಧಿಗೆ ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವುದು ಪ್ರಾಥಮಿಕ ಅಗತ್ಯ ಎಂದು ಪ್ರಧಾನಿ ಮೋದಿ ಒತ್ತಿಹೇಳಿದರು. ಗಡಿ ಸಂಬಂಧಿತ ಹಳೆಯ ಒಪ್ಪಂದಗಳು ಹಾಗೂ ತಿಳುವಳಿಕೆಗಳನ್ನು ಎರಡೂ ದೇಶಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ಸೂಚಿಸಿದರು. ಗಡಿ ಸಮಸ್ಯೆಗೆ ನ್ಯಾಯಸಮ್ಮತ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳಲು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಗೆ ಖಂಡನೆ, ಸ್ಥಳೀಯ ನಾಣ್ಯಗಳಲ್ಲಿ ವ್ಯವಹಾರ, ಸಂಘರ್ಷಕ್ಕೆ ಶಾಂತಿಯುತ ಮಾತುಕತೆ; ದೆಹಲಿಯ ಬ್ರಿಕ್ಸ್​ ಘೋಷಣೆಯಲ್ಲೇನಿದೆ?

ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು:

ಆಗಸ್ಟ್ 2025ರ ತಿಯಾಂಜಿನ್ ಭೇಟಿಯ ನಂತರ ಕಂಡುಬಂದ ಪ್ರಗತಿಯನ್ನು ಸ್ವಾಗತಿಸಿದ ನಾಯಕರು, ಎರಡೂ ದೇಶಗಳು ತಮ್ಮ ಬಾಂಧವ್ಯವನ್ನು ದೀರ್ಘಕಾಲೀನ ಮತ್ತು ಕಾರ್ಯತಂತ್ರದ ದೃಷ್ಟಿಕೋನದಿಂದ ನೋಡಬೇಕು ಹಾಗೂ ಭಿನ್ನಾಭಿಪ್ರಾಯಗಳಿಗೆ ವಿವಾದಗಳಾಗಲು ಆಸ್ಪದ ನೀಡಬಾರದು ಎಂದು ಒಪ್ಪಿಕೊಂಡರು. ಉಭಯ ದೇಶಗಳ ಮುಂಬರುವ ಸಂಬಂಧಗಳು ಮೂರು ಪ್ರಮುಖ ತತ್ವಗಳ ಮೇಲೆ ಆಧಾರಿತವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಅವುಗಳೆಂದರೆ, ಪರಸ್ಪರ ಗೌರವ, ಪರಸ್ಪರ ಸೂಕ್ಷ್ಮತೆ ಮತ್ತು ಪರಸ್ಪರ ಹಿತಾಸಕ್ತಿ.

ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ವ್ಯಾಪಾರ ನಂಟು ಹಾಗೂ ಪ್ರಜೆಗಳ ಉಚಿತ ಸಂಚಾರ ಉತ್ತೇಜಿಸುವ ಅಗತ್ಯವನ್ನು ನಾಯಕರು ಪ್ರತಿಪಾದಿಸಿದರು. ಆರ್ಥಿಕ ಸಂಬಂಧಗಳಲ್ಲಿ ಕಂಡುಬರುತ್ತಿರುವ ರಚನಾತ್ಮಕ ವ್ಯಾಪಾರ ಅಸಮತೋಲನ, ಪೂರೈಕೆ ಸರಣಿ ಸಮಸ್ಯೆಗಳು ಹಾಗೂ ಮಾರುಕಟ್ಟೆ ಪ್ರವೇಶದ ಸುಲಭತೆಯನ್ನು ಪರಸ್ಪರ ಸಮಾಲೋಚನೆಯ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಲಾಯಿತು.

ಬ್ರಿಕ್ಸ್ ಅಧ್ಯಕ್ಷತೆಗೆ ಚೀನಾ ಬೆಂಬಲಕ್ಕೆ ಮೋದಿ ಧನ್ಯವಾದ:

ಚೀನಾ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಿ ಮೋದಿ, “ಭಾರತದ ಬ್ರಿಕ್ಸ್ ಅಧ್ಯಕ್ಷತೆಗೆ ಚೀನಾ ನೀಡಿದ ಸಂಪೂರ್ಣ ಬೆಂಬಲ ಮತ್ತು ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಈ ದ್ವಿಪಕ್ಷೀಯ ಸಭೆಯು ನಮ್ಮ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸೂಕ್ತ ವೇದಿಕೆಯಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್; ಚೀನಾ ಅಧ್ಯಕ್ಷರಿಗೆ ವಿಶೇಷತೆ ವಿವರಿಸಿದ ಮೋದಿ

2020ರ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಭಾರತ-ಚೀನಾ ಸಂಬಂಧ ತೀವ್ರ ಕುಸಿತ ಕಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳು ಸಂಬಂಧ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿವೆ.

ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, “ಭಾರತ ಮತ್ತು ಚೀನಾ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಹಾಗೂ ಗ್ಲೋಬಲ್ ಸೌತ್‌ನ ಪ್ರಮುಖ ಸದಸ್ಯರಾಗಿದ್ದು, ದೊಡ್ಡ ಜವಾಬ್ದಾರಿಯನ್ನು ಹೊಂದಿವೆ. ಎರಡೂ ದೇಶಗಳು ಪರಸ್ಪರರ ಸಾಮರ್ಥ್ಯದಿಂದ ಕಲಿಯಲು ಮತ್ತು ಬೆಂಬಲಿಸಲು ಸಾಕಷ್ಟಿದೆ. ನಾವು ಜಾಗತಿಕ ಹಿತದೃಷ್ಟಿಯಿಂದ ಬ್ರಿಕ್ಸ್ ಒಕ್ಕೂಟದ ಚೌಕಟ್ಟಿನಲ್ಲಿ ಗುಣಮಟ್ಟದ ಸಹಕಾರವನ್ನು ಹೆಚ್ಚಿಸಬೇಕು” ಎಂದು ಹೇಳಿದ್ದಾರೆ.

ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ತಳಹದಿಯಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಗಡಿ ಸಂಬಂಧಿತ ವಿಷಯಗಳಲ್ಲಿ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಎರಡೂ ಕಡೆಯವರು ಪಾಲಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಉಭಯ ದೇಶಗಳ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ರಾಜಕೀಯ ದೃಷ್ಟಿಕೋನ ಮತ್ತು ಎರಡೂ ದೇಶಗಳ ಜನರ ದೀರ್ಘಕಾಲೀನ ಹಿತಾಸಕ್ತಿಗಳನ್ನು ಆಧರಿಸಿ, ಗಡಿ ಸಮಸ್ಯೆಗೆ ನ್ಯಾಯಸಮ್ಮತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಲು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು.

ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಹಾಗೂ ಸವಾಲುಗಳನ್ನು ಎದುರಿಸುವಲ್ಲಿ ಉಭಯ ದೇಶಗಳು ಜಂಟಿ ಸಹಕಾರ ಮತ್ತು ಒಮ್ಮತವನ್ನು ವಿಸ್ತರಿಸುವುದನ್ನು ಮುಂದುವರಿಸಬೇಕು ಎಂದು ನಾಯಕರು ಒಪ್ಪಿಕೊಂಡರು. ಭಾರತದ ಬ್ರಿಕ್ಸ್ ಅಧ್ಯಕ್ಷತೆಗೆ ಚೀನಾ ನೀಡಿದ ಬೆಂಬಲವನ್ನು ಹಾಗೂ ಬ್ರಿಕ್ಸ್ ಶೃಂಗಸಭೆಯ ಯಶಸ್ಸಿಗೆ ನೀಡಿದ ಕೊಡುಗೆಯನ್ನು ಪ್ರಧಾನಮಂತ್ರಿ ಮೋದಿ ಶ್ಲಾಘಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Sat, 12 September 26

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!