AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crowd Management: ಚಿನ್ನಸ್ವಾಮಿ ಸ್ಟೇಡಿಯಂ ದುರಂತದಂಥ ಘಟನೆ ನಿಯಂತ್ರಿಸಲು ಎಐ ನೆರವಿಗೆ ಪ್ರಸ್ತಾಪ

No One Should Die Celebrating- Suresh Narasimha: ಆರ್​​ಸಿಬಿ ಐಪಿಎಲ್ ಸಂಭ್ರಮಾಚರಣೆ ಶೋಕಾಚರಣೆಯಾಗಿ ತಿರುಗಿತ್ತು. 11 ಮಂದಿ ಬಲಿತೆಗೆದುಕೊಂಡ ಅಂಥ ಘಟನೆ ನಿಯಂತ್ರಿಸುವುದು ಹೇಗೆ? ಕೋ ಕ್ರಿಯೇಟ್ ವೆಂಚರ್ಸ್ ಸಂಸ್ಥಾಪಕ ಸುರೇಶ್ ನರಸಿಂಹ ಅವರು ಐದು ಅಂಶಗಳ ಎಐ ಫ್ರೇಂವರ್ಕ್​​ವೊಂದನ್ನು ಪ್ರಸ್ತಾಪಿಸಿದ್ದಾರೆ. ಹಿಂದಿನ ಕಾರ್ಯಕ್ರಮಗಳಲ್ಲಿನ ದತ್ತಾಂಶದ ನೆರವಿನಿಂದ ಎಷ್ಟು ಜನರು ಸೇರುತ್ತಾರೆ, ಎಷ್ಟು ದೊಡ್ಡ ಗುಂಪು ಸೇರುತ್ತದೆ ಎಂಬಿತ್ಯಾದಿಯನ್ನು ಮುಂಚಿತವಾಗಿ ಗ್ರಹಿಸಿ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಇದರಿಂದ ಸಾಧ್ಯ ಎಂದು ಅವರು ಹೇಳುತ್ತಾರೆ.

Crowd Management: ಚಿನ್ನಸ್ವಾಮಿ ಸ್ಟೇಡಿಯಂ ದುರಂತದಂಥ ಘಟನೆ ನಿಯಂತ್ರಿಸಲು ಎಐ ನೆರವಿಗೆ ಪ್ರಸ್ತಾಪ
ಸುರೇಶ್ ನರಸಿಂಹ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2025 | 3:12 PM

ಬೆಂಗಳೂರು, ಜೂನ್ 11: ಆರ್​​ಸಿಬಿ ಐಪಿಎಲ್ ಗೆದ್ದ ಮರುದಿನ ನಡೆದ ಸಂಭ್ರಮಾಚರಣೆ ವೇಳೆ ತೀವ್ರ ನೂಕುನುಗ್ಗಲುಗಳಾಗಿ ಕಾಲ್ತುಳಿತದಿಂದ (Chinnaswamy stadium stampede) 11 ಮಂದಿ ದಾರುಣವಾಗಿ ಬಲಿಯಾದ ದುರ್ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ವ್ಯವಸ್ಥೆ ಅಸಮರ್ಪಕವಾಗಿದ್ದರೆ, ಮುಂದಾಲೋಚನೆ, ಮುಂಜಾಗ್ರತೆ ಇಲ್ಲದೇ ಹೋದರೆ ಏನು ದುರಂತ ಸಂಭವಿಸುತ್ತದೆ ಎಂಬುದಕ್ಕೆ ಅದು ಒಂದು ಸ್ಪಷ್ಟ ನಿದರ್ಶನವಾಗಿ ನಿಂತಿದೆ. ಇಂಥ ದುರಂತ ಘಟನೆಯನ್ನು ಹೇಗೆ ನಿಯಂತ್ರಿಸಬಹುದು ಎನ್ನುವ ಚರ್ಚೆ ನಡೆಯುತ್ತಿದೆ. ಕೋಕ್ರಿಯೇಟ್ ವೆಂಚರ್ಸ್​​ನ (CoCreate Ventures) ಸ್ಥಾಪಕ ಸುರೇಶ್ ನರಸಿಂಹ (Suresh Narasimha) ಅವರು ಎಐ ತಂತ್ರಜ್ಞಾನ ಬಳಸಿ ನೂಕುನುಗ್ಗಲನ್ನು, ಗುಂಪನ್ನು ನಿಯಂತ್ರಿಸಲು ಸಾಧ್ಯ ಎಂದಿದ್ದಾರೆ. ಭವಿಷ್ಯದಲ್ಲಿ ಇಂಥ ದುರಂತ ತಪ್ಪಿಸಲು ಸಮಗ್ರ ಎಐ ಶಕ್ತ ಬ್ಲೂಪ್ರಿಂಟ್ ರೂಪಿಸುವ ಸಲಹೆ ನೀಡಿದ್ದಾರೆ.

ಸಾರ್ವಜನಿಕ ಸಮಾವೇಶ ಅಥವಾ ಕಾರ್ಯಕ್ರಮಗಳಲ್ಲಿ ಕಾಲ್ತುಳಿತದಂತಹ ಅವಘಡಗಳು ಸಂಭವಿಸಿದಂತಾಗಲು ನರಸಿಂಹ ಅವರು ಐದು ಅಂಶಗಳ ಎಐ ಸೂತ್ರವನ್ನು ಮುಂದಿಟ್ಟಿದ್ದಾರೆ:

  1. ಸಿಮುಲೇಶನ್ ಬಳಸಿ ಮುಂಚಿತವಾಗಿ ಯೋಜಿಸಬೇಕು
  2. ರಿಯಲ್ ಟೈಮ್​ನಲ್ಲಿ ರಿಸ್ಕ್ ಪತ್ತೆ ಮಾಡುವುದು
  3. ನಿಖರ ಸಂವಹನಕ್ಕಾಗಿ ಎಐ
  4. ಪ್ರವೇಶ ದ್ವಾರದ ಅಡಚಣೆ ನಿವಾರಣೆ
  5. ಇನ್​​ಫ್ರಾಸ್ಟ್ರಕ್ಚರ್ ಅವಶ್ಯಕತೆ ತಿಳಿಯುವುದು

ಇದನ್ನೂ ಓದಿ: ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್ ಕ್ರಾಂತಿ; 11 ವರ್ಷಗಳಲ್ಲಿ ಆದ ಸಾಧನೆಗಳೇನು? ಇಲ್ಲಿದೆ ಪಟ್ಟಿ

ಕಾರ್ಯಕ್ರಮ ಯೋಜನೆಗೆ ಎಐ

ಕಾರ್ಯಕ್ರಮಕ್ಕೆ ಯೋಜಿಸುತ್ತಿರುವಾಗ ಅಂದಾಜು ಬದಲು ಎಐ ಸಿಮುಲೇಶನ್​ಗಳನ್ನು ಬಳಸಬಹುದು ಎನ್ನುತ್ತಾರೆ ಕೋಕ್ರಿಯೇಟ್ ವೆಂಚರ್ಸ್​​​ನ ಸಂಸ್ಥಾಪಕರು. ಮಹಾಕುಂಭಮೇಳದಲ್ಲಿ ನಿತ್ಯವೂ ಜನರು ಗುಂಪುಗುಂಪಾಗಿ ಹೇಗೆ ಚಲಿಸುತ್ತಾರೆ ಎಂದು ಅಂದಾಜಿಸಲು ಜಿಐಎಸ್ ಮ್ಯಾಪಿಂಗ್ ಜೊತೆಗೆ ಎಐ ಸಿಮುಲೇಶನ್​ಗಳನ್ನು ಅಧಿಕಾರಿಗಳು ಬಳಸಿದ್ದನ್ನು ಉಲ್ಲೇಖಿಸಿದ ನರಸಿಂಹ ಅವರು, ಅಂಥದ್ದನ್ನು ಅಳವಡಿಸಿಕೊಳ್ಳಬಹುದು ಎಂದಿದ್ದಾರೆ. ಇದರಿಂದ ಜನರ ಹರಿವಿನ ಪ್ರಮಾಣ, ಅವಶ್ಯಕ ಇನ್​ಫ್ರಾಸ್ಟ್ರಕ್ಚರ್, ಅವಶ್ಯಕ ಸಂಪನ್ಮೂಲ ನಿಯೋಜನೆ ಎಲ್ಲವನ್ನೂ ಮುಂಚಿತವಾಗಿ ಗ್ರಹಿಸಲು ಇದರಿಂದ ಸಾಧ್ಯವಾಗುತ್ತದೆ ಎಂಬುದು ಅವರ ಅನಿಸಿಕೆ.

ರಿಯಲ್ ಟೈಮ್​​ನಲ್ಲಿ ಅಪಾಯ ಅರಿತು ಸೂಕ್ತ ನಿರ್ಧಾರಕ್ಕೆ ಎಐ ಬೇಕು

ಜನಸಂದಣಿ ಹೆಚ್ಚಿರುವ ಕಾರ್ಯಕ್ರಮಗಳಲ್ಲಿ ಸಿಸಿಟಿವಿ, ಡ್ರೋನ್, ಮೊಬೈಲ್ ಸಿಗ್ನಲ್ ಡಾಟಾವನ್ನು ಎಐ ಮೂಲಕ ಪರಿಷ್ಕರಿಸಿ ಗುಂಪನ್ನು ನಿಭಾಯಿಸುವುದು, ಸುರಕ್ಷಿತ ಮಾರ್ಗಗಳಿಗೆ ಕಳುಹಿಸುವುದು ಇತ್ಯಾದಿಯನ್ನು ಎಐ ಸಹಾಯದಿಂದ ಮಾಡಬಹುದು ಎನ್ನುತ್ತಾರೆ ಸುರೇಶ್ ನರಸಿಂಹ.

ಸಿಂಗಾಪುರದ ಸ್ಮಾರ್ಟ್ ನೇಶನ್ ಪ್ಲಾಟ್​​ಫಾರ್ಮ್ ಮಾದರಿಯಲ್ಲಿ ಮೊಬೈಲ್ ಆ್ಯಪ್ ಮೂಲಕ ಜಿಯೋ ಟಾರ್ಗೆಟೆಡ್ ಅಲರ್ಟಿ ಮತ್ತು ಪುಶ್ ನೋಟಿಫಿಕೇಶನ್ ಕಳುಹಿಸಬಹುದು. ಇದರಿಂದ ಕಾರ್ಯಕ್ರಮಕ್ಕೆ ಸೇರುವ ಜನರಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ ಎಂಬುದು ಕೋಕ್ರಿಯೇಟರ್ಸ್ ಸಂಸ್ಥಾಪಕ ಮತ್ತೊಂದು ಸಲಹೆ.

ಇದನ್ನೂ ಓದಿ: ಆರ್​​ಸಿಬಿ ಮಾರಾಟ ಮಾಡುವುದಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

ಇನ್ನು, ಕಾರ್ಯಕ್ರಮ ಆಯೋಜಿಸುವಾಗ ಪ್ರವೇಶ ದ್ವಾರದಲ್ಲಿ ನೊಂದಣಿ, ತಪಾಸಣೆ ಇತ್ಯಾದಿ ನಡೆಸಲಾಗುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ಜನರು ಸೇರಿದಾಗ ಬಹಳ ವಿಳಂಬವಾಗುತ್ತದೆ. ಆಗ ಗುಂಪು ಹೆಚ್ಚಾಗಿ ಅವಘಡಗಳಾಗಬಹುದು. ಸುರೇಶ್ ನರಸಿಂಹ ಅವರು ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ. ಅವರ ಪ್ರಕಾರ ಫೇಶಿಯಲ್ ರೆಕಗ್ನಿಶನ್ ಟೆಕ್ನಾಲಜಿ ಅಳವಡಿಸಬೇಕು. ಹಲವೆಡೆ ನೊಂದಣಿ ಕೇಂದ್ರ ಮತ್ತು ಪ್ರವೇಶ ದ್ವಾರಗಳನ್ನು ನಿರ್ಮಿಸಿರಬೇಕು.

ಹಾಗೆಯೇ, ಅವಘಡಗಳು ಸಂಭವಿಸಿಬಿಟ್ಟರೆ ಅದನ್ನು ನಿಭಾಯಿಸಲು ಅವಶ್ಯಕವಾಗಬಹುದಾದ ಆಂಬುಲೆನ್ಸ್, ನೀರು, ಸ್ವಯಂಸೇವಕರು ಇತ್ಯಾದಿ ಸೌಕರ್ಯಗಳನ್ನು ಮೊದಲೇ ನಿಯೋಜಿಸಿರಬೇಕು ಎಂದು ಹೇಳುತ್ತಾರೆ ಕೋ ಕ್ರಿಯೇಟ್ ವೆಂಚರ್ಸ್​​ನ ಸಂಸ್ಥಾಪಕ ಸುರೇಶ್ ನರಸಿಂಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ