ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರಿಂದ ಇನ್ಷೂರೆನ್ಸ್​ಗಾಗಿ ಅರ್ಜಿ ಸ್ವೀಕಾರ; ಆದರೆ ಹಿರಿಯರ ಬಗ್ಗೆ ಯಾಕಿಷ್ಟು ತಾತ್ಸಾರ?

Srinivas Mata

|

Updated on: Sep 24, 2021 | 10:31 PM

ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರಿಂದ ಇನ್ಷೂರೆನ್ಸ್​ ಮೊತ್ತಕ್ಕೆ ಅರ್ಜಿ ಸ್ವೀಕರಿಸಲಾಗುತ್ತದೆ. ಆದರೆ ಹೀಗೆ ಹಿರಿಯರನ್ನು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಿಸುವುದು ಸರಿಯಲ್ಲ.

ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರಿಂದ ಇನ್ಷೂರೆನ್ಸ್​ಗಾಗಿ ಅರ್ಜಿ ಸ್ವೀಕಾರ; ಆದರೆ ಹಿರಿಯರ ಬಗ್ಗೆ ಯಾಕಿಷ್ಟು ತಾತ್ಸಾರ?
ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು

Follow us on

“ಗುರು ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ನಿಂದ ಠೇವಣಿ ಪಡೆಯುವಾಗ ಆಯಾ ಶಾಖೆಗಳಲ್ಲೇ ತೆಗೆದುಕೊಂಡರು. ಈಗ ಠೇವಣಿ ಮೇಲಿನ ಇನ್ಷೂರೆನ್ಸ್​ ಪಡೆಯುವುದಕ್ಕೆ ಅರ್ಜಿ ಕೊಡುವ ಸಲುವಾಗಿ ಎನ್​.ಆರ್​. ಕಾಲೋನಿಯಲ್ಲಿನ ಕೇಂದ್ರ ಕಚೇರಿಗೇ ಬರಬೇಕು. ಇಡೀ ದಿನ ಸಾಲುಗಟ್ಟಿ ಗ್ರಾಹಕರು ಹಾಗೇ ನಿಂತಿರುತ್ತಾರೆ. ಅಲ್ಲಿ ನಿಂತವರ ಪೈಕಿ ಬಹುಪಾಲು ಹಿರಿಯ ನಾಗರಿಕರೇ ಇದ್ದಾರೆ. ಕೊಟ್ಟ ಹಣ ವಾಪಸ್​ ಬರುತ್ತೋ ಇಲ್ಲವೋ ಅನ್ನೋ ಆತಂಕದಲ್ಲೇ ದಿನ ದೂಡಿದವರಿಗೆ ಈಗ ಅದನ್ನು ಪಡೆಯುವುದಕ್ಕಾದರೂ ಒಂದಿಷ್ಟು ಸರಳ ಮಾರ್ಗೋಪಾಯಗಳನ್ನು ಮಾಡಬಾರದಿತ್ತಾ? ಯಾರಾದರೂ ಸಂಬಂಧಪಟ್ಟವರು ಠೇವಣಿದಾರರ ಈ ಸಂಕಷ್ಟದ ಕಡೆಗೆ ಗಮನ ಹರಿಸುತ್ತಾರಾ ನೋಡಬೇಕು,” ಹೀಗೆ ಹೇಳಿ ಒಮ್ಮೆ ನಿಡುಸುಯ್ದುರು ಗುರು ರಾಘವೇಂದ್ರ ಬ್ಯಾಂಕ್​ನ ಠೇವಣಿದಾರರಲ್ಲಿ ಒಬ್ಬರಾದ ಸತೀಶ್ ಕಾರಂತ್.

ಅವರ ಕಾಳಜಿಯಲ್ಲಿ ನೂರಕ್ಕೆ ನೂರರಷ್ಟು ಸತ್ಯ ಇತ್ತು. ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ ಹಣ ಇಟ್ಟಿದ್ದವರಿಂದ ಠೇವಣಿ ಮೇಲಿನ ಇನ್ಷೂರೆನ್ಸ್​ಗಾಗಿ ಅರ್ಜಿ ಪಡೆಯಲಾಗುತ್ತಿದೆ. ವಿದ್ಯಾರಣ್ಯಪುರ ಸೇರಿದಂತೆ ಬೆಂಗಳೂರಿನ ನಾನಾ ಕಡೆ ಶಾಖೆಗಳಿದ್ದ ಬ್ಯಾಂಕ್​ ಈಗ ಅಲ್ಲೆಲ್ಲೂ ಕಾರ್ಯ ನಿರ್ವಹಿಸುತ್ತಿಲ್ಲ. ಯಾರ್ಯಾರು ಬ್ಯಾಂಕ್​ನಲ್ಲಿ ಹಣ ಇಟ್ಟಿದ್ದರೋ ಅಂಥವರಿಗೆ 5 ಲಕ್ಷ ರೂಪಾಯಿಯೊಳಗೆ ಮೊತ್ತವನ್ನು (ಇನ್ಷೂರೆನ್ಸ್) ನೀಡಲಾಗುತ್ತದೆ. ಅದು ಕೂಡ ಡಿಐಸಿಜಿಸಿಯಿಂದ ಆ ಮೊತ್ತ ಸಿಗುತ್ತದೆ. ಅದಕ್ಕಾಗಿ ಠೇವಣಿದಾರರು ಬ್ಯಾಂಕ್​ಗೆ ತೆರಳಿ ಅರ್ಜಿ ಸಲ್ಲಿಸಬೇಕು. ಅಂದಹಾಗೆ ಗುರು ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್​ನಲ್ಲಿ ಹಣ ಇಟ್ಟವರ ಪೈಕಿ ದೊಡ್ಡ ಸಂಖ್ಯೆಯಲ್ಲಿ ಇರುವವರು ಹಿರಿಯ ನಾಗರಿಕರು.

ಬೆಂಗಳೂರಿನ ಯಾವ್ಯಾವುದೋ ಮೂಲೆಯಿಂದ ಬಂದು ಬ್ಯಾಂಕ್​ನ ಮುಂದೆ ಸಾಲುಗಟ್ಟಿ ನಿಂತು, ಅರ್ಜಿ ಸಲ್ಲಿಸಬೇಕು. ಈಗಿನ ಕೊರೊನಾ ಸನ್ನಿವೇಶದಲ್ಲಿ ಬೇರೆ ಯಾವುದಾದರೂ ಪರ್ಯಾಯ ವ್ಯವಸ್ಥೆ ಮಾಡುವುದಕ್ಕೆ ಬ್ಯಾಂಕ್​ಗೆ ನೇಮಿಸಿರುವ ಆಡಳಿತಾಧಿಕಾರಿಯಿಂದ ಸಾಧ್ಯವೇ ಎಂದು ಆಲೋಚಿಸಬೇಕು. ಡಿಐಸಿಜಿಸಿಯಿಂದ ಇನ್ಷೂರೆನ್ಸ್​ ಸಿಗುತ್ತಿರುವುದೇ ದೊಡ್ಡ ಸಂಗತಿ ಎಂದು ಬಿಂಬಿಸುವ ಮೊದಲಿಗೆ ಅದನ್ನು ವಿತರಿಸುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಲಿ. ರೀತಿ- ರಿವಾಜುಗಳು ಏನೇ ಇರಲಿ, ಹಿರಿಯರನ್ನು ಹಾಗೇ ಗಂಟೆಗಟ್ಟಲೆ ನಿಲ್ಲಿಸಿ, ಎಲ್ಲೆಲ್ಲಿಂದಲೋ ಬರುವಂತೆ ಮಾಡುವುದು ಎಷ್ಟು ಸರಿ?

ಇವತ್ತಿನ ಕೊರೊನಾ ಸನ್ನಿವೇಶ ಹಾಗೂ ಗ್ರಾಹಕರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರ ವಯಸ್ಸು ಮತ್ತಿತರ ಕಾರಣಗಳನ್ನು ಗಮನಿಸಿಯಾದರೂ ಸದ್ಯದ ಆಡಳಿತ ಮಂಡಳಿಯಿಂದ ಈ ಅರ್ಜಿ ಸ್ವೀಕಾರ ಕ್ರಮದಲ್ಲಿ ಬದಲಾವಣೆ ಆಗಲೇಬೇಕು. ತಮ್ಮ ಹಣ ಬರುತ್ತದೋ ಇಲ್ಲವೋ ಎಂದು ಈಗಾಗಲೇ ನೊಂದಿರುವರನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕಾಗಿರುವುದು ಕರ್ತವ್ಯ. ಬ್ಯಾಂಕ್​ಗೆ ಸಂಬಂಧಿಸಿದವರಾಗಲೀ ಆರ್​ಬಿಐನಿಂದಾಗಲೀ ಈ ಬಗ್ಗೆ ಸೂಕ್ತ ಚಿಂತನೆ ನಡೆಯಬೇಕು. ಇನ್ಷೂರೆನ್ಸ್​ ಮೂಲಕ ಠೇವಣಿ ಹಣ ಮತ್ತು ಬಡ್ಡಿ ಬರುವುದು ಸಂತೋಷದ ವಿಚಾರವೇ. ಆದರೆ ಹೀಗೆ ಗಂಟೆಗಟ್ಟಲೆ ನಿಲ್ಲುವಂತೆ ಮಾಡುವುದು ಅಮಾನವೀಯ.

ಇದನ್ನೂ ಓದಿ: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ; ನವೆಂಬರ್​ ಒಳಗೆ ಠೇವಣಿ ಮೇಲಿನ ವಿಮಾ ಹಣ ಗ್ರಾಹಕರಿಗೆ ಲಭ್ಯ

TV9 Facebook Live: ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು ಇನ್​ಕಮ್​ ಟ್ಯಾಕ್ಸ್​ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ

(Guru Raghavendra Co Operative Bank Administrators Should Find Alternative Way To Accept Deposit Insurance Applications)

ತಾಜಾ ಸುದ್ದಿ

Related Stories

Click on your DTH Provider to Add TV9 Kannada