ಯುಪಿಐ ಟ್ರಾನ್ಸಾಕ್ಷನ್ಗೂ ತೆರಿಗೆಗೆ ಕಾಂಗ್ರೆಸ್ ವಿರೋಧ: ಇದು ದೇಶದ ಜನರಿಗೆ ಮಾಡಿದೆ ಮೋಸ ಎಂದ ಸುರ್ಜೇವಾಲ
ಯುಪಿಐ ವಹಿವಾಟಿಗೆ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮೋಸ ಎಂದು ಕಿಡಿಕಾರಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ನಾಯಕರ ಮೇಲಿನ ಇಡಿ ದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಇನ್ನು ಸಿಎಂ ಡಿಕೆಶಿ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಶಾಸಕರಿಗೆ ಸ್ಥಾನ ನೀಡದ ವಿಚಾರ ಸಂಬಂಧವೂ ಮಾತನಾಡಿರುವ ಸುರ್ಜೇವಾಲ, ನನ್ನದೇ ತಪ್ಪಿಂದ ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿ ಇಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 16: ಯುಪಿಐ ಟ್ರಾನ್ಸಾಕ್ಷನ್ಗೂ ಟ್ಯಾಕ್ಸ್ ವಿಧಿಸಿರುವ ಕೇಂದ್ರ ಸರ್ಕಾರದ ನಡೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ದೇಶದ ಜನರಿಗೆ ಮಾಡಿದ ಮೋಸ ಎಂದು ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.ಬಡವರು, ಮಧ್ಯಮವರ್ಗ ಸೇರಿ ಎಲ್ಲರ ಮೇಲೂ ಇದರ ಪರಿಣಾಮ ಆಗಲಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಅಮೆರಿಕ ಕಂಪನಿಗಳಿಗೆ ಸರೆಂಡರ್ ಆಗಿದೆ. ಯುಪಿಐ ಟ್ರಾನ್ಸಾಕ್ಷನ್ ಮೇಲೆ ಟ್ಯಾಕ್ಸ್ನಿಂದ ಜನರಿಗೆ ಹೊರೆಯಾಗಲಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ 0.4% ಶುಲ್ಕ ವಿಧಿಸುವುದರಿಂದ ಟ್ರಾನ್ಸಾಕ್ಷನ್ ಟ್ಯಾಕ್ಸ್ ಮುಂದೆ ಎಲ್ಲರಿಗೂ ವಿಸ್ತರಣೆ ಮಾಡುವ ಆತಂಕ ಎದುರಾಗಿದೆ. ಮೋದಿ ಸರ್ಕಾರ ಯುಪಿಐ ಅನ್ನು ಕಲೆಕ್ಷನ್ ಮಷಿನ್ ಆಗಿ ಮಾಡ್ತಿದೆ ಎಂದವರು ವಾಗ್ದಾಳಿ ನಡೆಸಿದ್ದಾರೆ.
‘ವಂದೇ ಮಾತರಂ ಹಾಡುವುದಿಲ್ಲ ಎಂದು ಯಾರೂ ಹೇಳಿಲ್ಲ’
ವಂದೇ ಮಾತರಂ ಗೀತೆಯ 2 ಚರಣ ಮಾತ್ರ ಹಾಡುವಂತೆ ರಾಜ್ಯ ಸರ್ಕಾರದ ಆದೇಶ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅವರು, ಕೇಂದ್ರದ ಗೈಡ್ಲೈನ್ಸ್ಗೆ ಬದ್ಧವಾಗಿ ನಮ್ಮ ಸರ್ಕಾರ ನಿರ್ಧರಿಸಿದೆ. ಸರ್ಕಾರ ವಂದೇ ಮಾತರಂಗೆ ಗೌರವ ನೀಡುವ ಕೆಲಸ ಮಾಡಿದೆ. ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನಿ ಬಂದಾಗ ಪೂರ್ಣ ಗೀತೆ ಹಾಡಲಾಗುತ್ತೆ. ವಂದೇ ಮಾತರಂ ಹಾಡುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಯುಪಿಐ ಪೇಮೆಂಟ್ಗೆ ಎಂಡಿಆರ್, ಮತ್ತಷ್ಟು ಸ್ಪಷ್ಟತೆ; 2,000 ರೂ ಮೇಲ್ಪಟ್ಟ ಪಾವತಿಗೆ ಎಷ್ಟಿರುತ್ತೆ ಶುಲ್ಕ? ಇಲ್ಲಿದೆ ಪೂರ್ಣ ವಿವರ
‘ಸತೀಶ್ ಜಾರಕಿಹೊಳಿಯವರನ್ನು ಟಾರ್ಗೆಟ್ ಮಾಡಲಾಗಿದೆ’
ಸತೀಶ್ ಎಸ್ಟಿ ಸಮುದಾಯದ ನಾಯಕ ಎಂಬ ಕಾರಣಕ್ಕೆ ಸತೀಶ್ ಜಾರಕಿಹೊಳಿಯವರನ್ನು 2 ಬಾರಿ ಟಾರ್ಗೆಟ್ ಮಾಡಲಾಗಿದೆ. ಡಿಕೆ ಬ್ರದರ್ಸ್ ಮೇಲೂ ಕೇಂದ್ರದ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಸಿದ್ದರಾಮಯ್ಯ ಮೇಲೂ ED ದಾಳಿ ಮಾಡಲಾಗಿತ್ತು. ಭೈರತಿ ಸುರೇಶ್, ಜಮೀರ್, ಕೆ.ವಿ.ವೀರೇಂದ್ರ ಪಪ್ಪಿ, ಡಾ.ಪರಮೇಶ್ವರ್, ನಾರಾ ಭರತ್ ರೆಡ್ಡಿ, ನಾಗೇಂದ್ರ, ದದ್ದಲ್ ಮೇಲೆ ದಾಳಿ ನಡೆಯಿತು. ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡಿರುವ ದೊಡ್ಡ ಪಟ್ಟಿಯಿದೆ. ಇದಕ್ಕೆ ಪ್ರಮುಖ ಕಾರಣ ಇವರೆಲ್ಲ ಎಸ್ಸಿ, ಎಸ್ಟಿ ನಾಯಕರು ಎಂಬುದಾಗಿದೆ. ಯಾವುದೇ ಕಾರಣಕ್ಕೂ ನಾವು ಕೇಂದ್ರದ ಮುಂದೆ ತಲೆ ಬಾಗುವುದಿಲ್ಲ. ನಾವೆಲ್ಲರೂ ಸಚಿವ ಸತೀಶ್ ಜಾರಕಿಹೊಳಿ ಜೊತೆ ಇದ್ದೇವೆ. ಕುಮಾರಸ್ವಾಮಿ, ಯಡಿಯೂರಪ್ಪ, ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಇವರ ಮೇಲೆ ಪ್ರಾಸಿಕ್ಯೂಷನ್ ಪೆಂಡಿಂಗ್ ಇಲ್ವಾ? ಎಂದು ಪ್ರಶ್ನಿಸಿದ ಅವರು, ಈಗಾಗಲೇ ಜಾರಿ ನಿರ್ದೇಶನಾಲಯದ ಬಣ್ಣ ಬಟಾಬಯಲಾಗಿದೆ. ಇಡಿ ಚುನಾವಣಾ ವಿಭಾಗದ ಮಷೀನ್ ಮಾದರಿ ಕೆಲಸ ಮಾಡುತ್ತಿದೆ ಎಂದು ಸುರ್ಜೇವಾಲ ದೂರಿದ್ದಾರೆ.
‘ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿ ಇಲ್ಲ, ತಪ್ಪು ನನ್ನದೇ’
ಇನ್ನು ಸಿಎಂ ಡಿಕೆಶಿ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಶಾಸಕರಿಗೆ ಸ್ಥಾನ ನೀಡದ ವಿಚಾರ ಸಂಬಂಧವೂ ಮಾತನಾಡಿರುವ ಸುರ್ಜೇವಾಲ, ನನ್ನದೇ ತಪ್ಪಿಂದ ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿ ಇಲ್ಲ. ಇದು ದೆಹಲಿಯ ಹೈಕಮಾಂಡ್ ತಪ್ಪಲ್ಲ, ನನ್ನ ತಪ್ಪು. ನಾನೇ ಒಬ್ಬ ಅಭ್ಯರ್ಥಿಯನ್ನು ಫೈನಲ್ ಮಾಡಲು ಸಾಧ್ಯವಾಗಿಲ್ಲ. ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದರು, ಹೀಗಾಗಿ ಸಾಧ್ಯವಾಗಲಿಲ್ಲ. ಆದರೆ ಮಹಿಳೆಗೆ ಸಚಿವ ಸ್ಥಾನ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸ್ತೇವೆ. ಮಹಿಳಾ ಸಬಲೀಕರಣದ ವಿಚಾರದಲ್ಲಿ ಅತ್ಯಂತ ಗಂಭೀರವಾಗಿದ್ದೇವೆ. ಮೈತ್ರಿ ಸರ್ಕಾರದಲ್ಲಿ ಹೆಚ್ಡಿಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದರು. ಹೀಗಾಗಿ ಕುಮಾರಸ್ವಾಮಿಗೆ ಮಾತನಾಡುವ ಹಕ್ಕಿಲ್ಲ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Wed, 16 September 26




