ಗಣೇಶ ಚತುರ್ಥಿ 2026: ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ, ಹೂವು, ಹಣ್ಣು ತುಸು ದುಬಾರಿ
ಗೌರಿ ಗಣೇಶ ಹಬ್ಬ 2026: ಗಣೇಶ ಚತುರ್ಥಿ 2026 ರ ಸಂಭ್ರಮದಲ್ಲಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಬೆಲೆ ತುಸು ದುಬಾರಿಯಾದರೂ ಸಹ ಗ್ರಾಹಕರು ಲೆಕ್ಕಿಸದೆ ಉತ್ಸಾಹದಿಂದ ಖರೀದಿ ನಡೆಸುತ್ತಿದ್ದಾರೆ. ಒಂದೇ ದಿನ ಗೌರಿ-ಗಣೇಶ ಹಬ್ಬ ಬಂದಿರುವುದರಿಂದ ಸಂಭ್ರಮ ದುಪ್ಪಟ್ಟಾಗಿದೆ. ಹಬ್ಬದ ಸಡಗರ ನಗರದೆಲ್ಲೆಡೆ ಮನೆ ಮಾಡಿದೆ.

ಬೆಂಗಳೂರು, ಸೆಪ್ಟೆಂಬರ್ 14: ಗಣೇಶ ಚತುರ್ಥಿ 2026 ರ ಸಂಭ್ರಮವು ನಾಡಿನಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ ಮನೆ ಮಾಡಿದೆ. ಗೌರಿ-ಗಣೇಶ ಹಬ್ಬವು ಒಂದೇ ದಿನ ಬಂದಿರುವುದರಿಂದ ಈ ವರ್ಷದ ಸಂಭ್ರಮ ದುಪ್ಪಟ್ಟಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆ ನಸುಕಿನ ಜಾವದಿಂದಲೇ ಗ್ರಾಹಕರಿಂದ ತುಂಬಿ ತುಳುಕುತ್ತಿದೆ. ಹೂವು, ಹಣ್ಣು, ಗಣೇಶ ವಿಗ್ರಹಗಳು ಸೇರಿದಂತೆ ಹಬ್ಬದ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ಮಗ್ನರಾಗಿದ್ದಾರೆ. ಬೆಲೆ ದುಬಾರಿಯಾಗಿದ್ದರೂ, ಗ್ರಾಹಕರು ಅದನ್ನು ಲೆಕ್ಕಿಸದೆ ತಮ್ಮ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸೇವಂತಿಗೆ, ತಾವರೆ, ಗುಲಾಬಿ, ಕನಕಾಂಬರ, ಮಲ್ಲಿಗೆಯಂತಹ ಹೂವುಗಳು ಹಾಗೂ ಆಪಲ್, ದಾಳಿಂಬೆ, ಬಾಳೆಹಣ್ಣುಗಳ ಬೆಲೆ ಏರಿಕೆಯಾಗಿದ್ದರೂ, ಹಬ್ಬದ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗಿಲ್ಲ.
ಕೆ.ಆರ್. ಮಾರುಕಟ್ಟೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಹಬ್ಬದ ಸಡಗರವು ಪ್ರತಿ ಗಲ್ಲಿಯಲ್ಲೂ ಕಳೆಗಟ್ಟಿದ್ದು, ಬೆಂಗಳೂರಿನ ಜನರು ಗಣೇಶ ಚತುರ್ಥಿ 2026 ಅನ್ನು ಗ್ರ್ಯಾಂಡ್ ಆಗಿ ಆಚರಿಸುತ್ತಿದ್ದಾರೆ.
ಹೂವು, ಹಣ್ಣುಗಳ ದರ ತುಸು ಏರಿಕೆ (ಹೂವು ಮತ್ತು ಅಲಂಕಾರಿಕ ವಸ್ತುಗಳ ದರ ವಿವರ)
- ಸೇವಂತಿ: ₹350 (1 ಕೆ.ಜಿ)
- ತಾವರೆ ಹೂವು (ಜೋಡಿ): ₹50
- ಗುಲಾಬಿ (ಬಟನ್): ₹350 (1 ಕೆ.ಜಿ)
- ಮಿಕ್ಸ್ ಹೂವು: ₹300–₹400 (1 ಕೆ.ಜಿ)
- ಕನಕಾಂಬರ: ₹50 (ಮೊಳ), ₹2,000 (1 ಕೆ.ಜಿ)
- ಮಲ್ಲಿಗೆ: ₹50 (ಮೊಳ), ₹1,000 (1 ಕೆ.ಜಿ)
- ತುಳಸಿ ತೋರಣ: ₹60 (ಮೊಳ)
- ಮಾವಿನ ಎಲೆ: ₹10–₹30 (ಕಟ್ಟು)
- ಬಾಳೆ ದಿಂಡು: ₹50–₹80 (ಜೋಡಿ)
ಹಣ್ಣುಗಳ ದರ ವಿವರ
- ಸೇಬು: ₹200–₹300 (1 ಕೆ.ಜಿ)
- ದಾಳಿಂಬೆ: ₹100–₹250 (1 ಕೆ.ಜಿ)
- ಸಪೋಟ: ₹150–₹200 (1 ಕೆ.ಜಿ)
- ದ್ರಾಕ್ಷಿ: ₹120–₹150 (1 ಕೆ.ಜಿ)
- ಮೂಸಂಬಿ ಹಾಗೂ ಕಿತ್ತಳೆ: ₹80–₹100 (1 ಕೆ.ಜಿ)
- ಬಾಳೆಹಣ್ಣು: ₹80–₹150 (1 ಕೆ.ಜಿ)
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Mon, 14 September 26




