ತರಕಾರಿಗೆ ಗ್ರಾಹಕ ಕೊಡುವ ಬೆಲೆಯಲ್ಲಿ ರೈತನಿಗೆ ಸಿಗೋದೆಷ್ಟು? ಆರ್​ಬಿಐ ವರದಿಯಲ್ಲಿ ಮಾಹಿತಿ

RBI study report: ಹಣ್ಣು, ತರಕಾರಿಗಳ ರೀಟೇಲ್ ಬೆಲೆಯಲ್ಲಿ ರೈತನಿಗೆ ಸಿಗುವ ಪಾಲು ಮೂರನೇ ಒಂದು ಭಾಗ ಮಾತ್ರ ಎಂದು ಆರ್​ಬಿಐನ ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. ದವಸ ಧಾನ್ಯಗಳು, ಹಾಲಿನ ಉತ್ಪನ್ನಗಳಲ್ಲಿ ರೈತರಿಗೆ ಉತ್ತಮ ಪಾಲು ಸಿಗುತ್ತದೆ. ಹಣ್ಣು, ತರಕಾರಿಗಳು ಬೇಗ ಹಾಳಾಗಿ ಹೋಗುವುದರಿಂದ ಅಂತಿಮ ಗ್ರಾಹಕರನ್ನು ತಲುಪುವಷ್ಟರಲ್ಲಿ ಬೆಲೆ ದುಬಾರಿಯಾಗುತ್ತದೆ.

ತರಕಾರಿಗೆ ಗ್ರಾಹಕ ಕೊಡುವ ಬೆಲೆಯಲ್ಲಿ ರೈತನಿಗೆ ಸಿಗೋದೆಷ್ಟು? ಆರ್​ಬಿಐ ವರದಿಯಲ್ಲಿ ಮಾಹಿತಿ
ರೈತ
Follow us
|

Updated on: Oct 08, 2024 | 2:00 PM

ನವದೆಹಲಿ, ಅಕ್ಟೋಬರ್ 8: ಹಣ್ಣು, ತರಕಾರಿ, ದವಸ, ಧಾನ್ಯ ಇತ್ಯಾದಿ ಆಹಾರವಸ್ತುಗಳ ಬೆಲೆ ಹೆಚ್ಚಾದಾಗ ರೈತರ ಆದಾಯ ಹೆಚ್ಚುತ್ತದೆ ಎಂದು ಹಲವು ಭಾವಿಸಬಹುದು. ಆದರೆ, ಆಹಾರವಸ್ತುವಿಗೆ ಗ್ರಾಹಕ ನೀಡುವ ಬೆಲೆಯಲ್ಲಿ ಅಲ್ಪ ಮೊತ್ತ ಮಾತ್ರವೇ, ಅದನ್ನು ಬೆಳೆದ ರೈತನಿಗೆ ಸಿಗುವುದು. ರೈತನಿಂದ ಪಡೆಯಲಾಗುವ ಆಹಾರವಸ್ತು ಅಂತಿಮ ರೀಟೇಲ್ ಗ್ರಾಹಕನನ್ನು ತಲುಪವ ಹೊತ್ತಿಗೆ ಹಲವು ಪಟ್ಟು ಬೆಲೆ ಹೆಚ್ಚಳ ಪಡೆದು ಹೋಗಿರುತ್ತದೆ. ಈ ಬಗ್ಗೆ ಆರ್​ಬಿಐ ಅಧ್ಯಯನ ನಡೆಸಿದ್ದು, ಗ್ರಾಹಕರು ನೀಡುವ ಹಣದಲ್ಲಿ ರೈತನಿಗೆ ಸಿಗುವುದು ಮೂರನೇ ಒಂದು ಭಾಗ ಮಾತ್ರ. ಶೆ. 35 ಕ್ಕಿಂತಲೂ ಕಡಿಮೆ. ಮೂರನೇ ಎರಡರಷ್ಟು ಭಾಗವು ಮಧ್ಯವರ್ತಿಗಳು, ರೀಟೇಲ್ ಮಾರಾಟಗಾರರಿಗೆ ಹಂಚಿಹೋಗುತ್ತದೆ.

ಭಾರತದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ತರಕಾರಿಗಳಾದ ಟೊಮೆಟೋ, ಈರುಳ್ಳಿ ಮತ್ತು ಆಲೂಗಡ್ಡೆಯ ಬೆಲೆ ಹಂಚಿಕೆ ಬಗ್ಗೆ ಆರ್​ಬಿಐ ಅಧ್ಯಯನ ನಡೆಸಿದೆ. ಟೊಮೆಟೋ ಬೆಲೆಯಲ್ಲಿ ರೈತನಿಗೆ ಶೇ. 33ರಷ್ಟು ಮಾತ್ರವೇ ಪಾಲು ಸಿಗುವುದು. ಈರುಳ್ಳಿಯಲ್ಲಿ ಶೇ. 36, ಆಲೂಗಡ್ಡೆಯಲ್ಲಿ ಶೇ. 37ರಷ್ಟು ಪಾಲು ಮಾತ್ರ ರೈತನದ್ದು ಎನ್ನುತ್ತದೆ ಈ ಅಧ್ಯಯನ. ಉದಾಹರಣೆಗೆ, ಈರುಳ್ಳಿ ಬೆಲೆ 100 ರೂ ಇದ್ದಲ್ಲಿ, ಅದನ್ನು ಬೆಳೆದು ಮಾರಿದ ರೈತರಿಗೆ ಸಿಗುವುದು 36 ರೂ ಮಾತ್ರ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಟಾಪ್ ಕಂಪನಿಗಳಲ್ಲಿ ತರಬೇತಿ, ಜೊತೆಗೆ ವರ್ಷಕ್ಕೆ 66,000 ರೂ ಕೊಡುಗೆ; ಶಿಕ್ಷಣ, ವಯಸ್ಸು ಇತ್ಯಾದಿ ಅರ್ಹತೆಗಳ ವಿವರ

ಬಾಳೆಹಣ್ಣು ಶೇ. 31, ದ್ರಾಕ್ಷಿ ಶೇ. 35 ಮತ್ತು ಮಾವಿನಹಣ್ಣು ಶೇ. 43ರಷ್ಟು ಬೆಲೆ ಪಾಲು ರೈತನಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಈ ಹಣ್ಣು ಮತ್ತು ತರಕಾರಿ ವಿಚಾರದಲ್ಲಿ ಹೆಚ್ಚಿನ ಲಾಭವು ಮಧ್ಯವರ್ತಿಗಳು ಮತ್ತು ಮಾರಾಟಗಾರರಿಗೆಯೇ ಹೊರಟು ಹೋಗುತ್ತದೆ. ಇದು ಅಂತಿಮವಾಗಿ ಗ್ರಾಹಕರು ಮತ್ತು ರೈತರು ಇಬ್ಬರಿಗೂ ನಷ್ಟದ ಸಂಗತಿ.

ಕುತೂಹಲದ ಸಂಗತಿ ಎಂದರೆ ಹಾಲು, ಬೇಳೆಕಾಳು, ದವಸ ಧಾನ್ಯಗಳ ವಿಚಾರಕ್ಕೆ ಬಂದರೆ ಅಂತಿಮ ರೀಟೇಲ್ ಬೆಲೆಯಲ್ಲಿ ರೈತನ ಪಾಲು ಶೇ. 65ರಿಂದ 75ರಷ್ಟಿರುತ್ತದೆ.

ಇದನ್ನೂ ಓದಿ: ವಿದೇಶೀ ಹೂಡಿಕೆಗಳಲ್ಲೇ ವಿವಿಧ ಬಗೆ; ಎಫ್​ಡಿಐ, ಎಫ್​ಪಿಐ ಮತ್ತು ಎಫ್​ಐಐ ಮಧ್ಯೆ ವ್ಯತ್ಯಾಸಗಳೇನು?

ಹಣ್ಣು, ತರಕಾರಿಗಳಿಂದ ಏನು ಸಮಸ್ಯೆ?

ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ಬಾಳಿಕೆ ಹೊಂದಿರುವುದಿಲ್ಲ. ಆದಷ್ಟೂ ಬೇಗ ಅವು ಗ್ರಾಹಕರನ್ನು ತಲುಪಬೇಕಾಗುತ್ತದೆ. ಈ ಹಾದಿಯಲ್ಲಿ ಸಾಕಷ್ಟು ವಸ್ತುಗಳು ಹಾಳಾಗಿ ಹೋಗುತ್ತವೆ. ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆ, ಸಂಗ್ರಹಾಗಾರಗಳ ಕೊರತೆ, ಮಧ್ಯವರ್ತಿಗಳು ಹೀಗೆ ಹಲವು ಕಾರಣಗಳಿಗೆ ಈ ಹಣ್ಣ ತರಕಾರಿಗಳ ಬೆಲೆ ರೀಟೇಲ್ ಗ್ರಾಹಕರನ್ನು ತಲುಪವಷ್ಟರಲ್ಲಿ ಮೂರ್ನಾಲ್ಕು ಪಟ್ಟು ಹೆಚ್ಚಿ ಹೋಗಿರುತ್ತದೆ ಎಂದು ಹೇಳುತ್ತದೆ ಅಧ್ಯಯನ ವರದಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ