ಬಿಟಿಎಂ ಲೇಔಟ್ ವ್ಯಾಪ್ತಿಯ 3 ಮೆಟ್ರೋ ನಿಲ್ದಾಣಗಳಿಗೆ ಸ್ಥಳೀಯ ಹೆಸರುಗಳನ್ನೇ ಇಡಿ: ಬಿಎಂಆರ್ಸಿಎಲ್ಗೆ ರಾಮಲಿಂಗಾ ರೆಡ್ಡಿ ಪತ್ರ
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಆರು ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿದೆ. ಹೀಗಿರುವಾಗ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಿಂಕ್ ಲೈನ್ ಮೆಟ್ರೋ ಸ್ಟೇಷನ್ಗಳ ಹೆಸರು ಬದಲಾಯಿಸುವಂತೆ ಬಿಎಂಆರ್ಸಿಎಲ್ ಎಂಡಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 12: ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಪಿಂಕ್ ಲೈನ್ ಮಾರ್ಗದಲ್ಲಿರುವ ಮೂರು ಮೆಟ್ರೋ ನಿಲ್ದಾಣಗಳ ಹೆಸರುಗಳನ್ನು ಬದಲಾಯಿಸುವಂತೆ ಬಿಟಿಎಂ ಲೇಔಟ್ ಶಾಸಕ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಈ ನಿಲ್ದಾಣಗಳಿಗೆ ಸ್ಥಳೀಯ ಪ್ರದೇಶದ ಹಾಗೂ ಜನಸಾಮಾನ್ಯರಿಗೆ ಪರಿಚಿತವಾಗಿರುವ ಹೆಸರುಗಳನ್ನೇ ಮರುನಾಮಕರಣ ಮಾಡಬೇಕೆಂದು ಅವರು ಕೋರಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಬರೆದ ಪತ್ರದಲ್ಲಿ ಏನಿದೆ?
ನನ್ನ ಮತಕ್ಷೇತ್ರ ಬಿಟಿಎಂ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ/ನಿರ್ಮಾಣ ಹಂತದಲ್ಲಿರುವ ಮೆಟ್ರೋ ನಿಲ್ದಾಣಗಳ ಹೆಸರುಗಳನ್ನು ಆಯಾ ನಿಲ್ದಾಣಗಳು ಇರುವ ಸ್ಥಳೀಯ ಪ್ರದೇಶದ ಹೆಸರು, ಐತಿಹಾಸಿಕ ಹಾಗೂ ಭೌಗೋಳಿಕ ಮಹತ್ವ ಮತ್ತು ಸಾರ್ವಜನಿಕರ ಸಾಮಾನ್ಯ ಅಭಿಪ್ರಾಯವನ್ನು ಪರಿಗಣಿಸಿ ಸೂಕ್ತವಾಗಿ ಮರುನಾಮಕರಣ ಮಾಡುವ ಅಗತ್ಯವಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾದ್ರೂ 20 ನಿಲ್ದಾಣಗಳಿಗಿಲ್ಲ ದೊಡ್ಡ ಮಟ್ಟದ ಪ್ರಯಾಣಿಕರ ಸಂಖ್ಯೆ!
ಪ್ರಸ್ತುತ ಕೆಲವು ಮೆಟ್ರೋ ನಿಲ್ದಾಣಗಳ ಹೆಸರು ನಿಲ್ದಾಣ ಇರುವ ನಿಖರ ಸ್ಥಳ ಅಥವಾ ಆ ಪ್ರದೇಶದ ಜನರಿಗೆ ಹೆಚ್ಚು ಪರಿಚಿತವಾಗಿರುವ ಸ್ಥಳೀಯ ಹೆಸರನ್ನು ಪ್ರತಿಬಿಂಬಿಸುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ನಿಲ್ದಾಣದ ಸ್ಥಳವನ್ನು ಗುರುತಿಸಲು ಕೆಲವೊಮ್ಮೆ ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಪರಿಚಿತ ಹೆಸರು ಇಡುವಂತೆ ಸಚಿವ ರಾಮಲಿಂಗಾರೆಡ್ಡಿ ಸಲಹೆ
ಇನ್ನು ನಿಲ್ದಾಣಗಳ ಹೆಸರುಗಳನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ನಿಲ್ದಾಣ ಇರುವ ಸ್ಥಳೀಯ ಪ್ರದೇಶದ ಪ್ರಚಲಿತ ಹೆಸರು, ಸ್ಥಳೀಯವಾಗಿ ಸಾರ್ವಜನಿಕರಿಗೆ ಹೆಚ್ಚು ಪರಿಚಿತವಾಗಿರುವ ಹೆಸರು, ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಮತ್ತು ಪ್ರಯಾಣಿಕರಿಗೆ ನಿಲ್ದಾಣವನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವ ಹೆಸರು ಪರಿಗಣಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.
ಯಾವ ಮೆಟ್ರೋ ನಿಲ್ದಾಣಕ್ಕೆ ಯಾವ ಹೆಸರು?
- ಜೆಪಿ ನಗರ 4ನೇ ಹಂತ ಮೆಟ್ರೋ ನಿಲ್ದಾಣಕ್ಕೆ ಎನ್ಎಸ್ ಪಾಳ್ಯ ಮೆಟ್ರೋ ನಿಲ್ದಾಣ
- ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಎಸ್ಜಿ ಪಾಳ್ಯ ಮೆಟ್ರೋ ನಿಲ್ದಾಣ
- ಡೈರಿ ವೃತ್ತ ಮೆಟ್ರೋ ನಿಲ್ದಾಣಕ್ಕೆ ಲಕ್ಕಸಂದ್ರ ಮೆಟ್ರೋ ನಿಲ್ದಾಣ
ಇದನ್ನೂ ಓದಿ: ಉದ್ಘಾಟನೆಗೆ ಸಿದ್ಧವಾದ ಪಿಂಕ್ ಲೈನ್ ಮೆಟ್ರೋ ಮಾರ್ಗ: ಕೊಂಚ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಂಬಂಧಪಟ್ಟ ಮೆಟ್ರೋ ನಿಲ್ದಾಣಗಳ ಹೆಸರುಗಳನ್ನು ಸ್ಥಳೀಯ ನಿವಾಸಿಗಳು, ಸಾರ್ವಜನಿಕರು, ಸ್ಥಳೀಯ ಮುಖಂಡರುಗಳ ಅಭಿಪ್ರಾಯವನ್ನು ಪಡೆದ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಪರಿಗಣಿಸಿ ತಿಳಿಸಿರುವಂತೆ ಮೆಟ್ರೋ ನಿಲ್ದಾಣಗಳ ಹೆಸರನ್ನು ಸೂಚಿಸಿರುವಂತೆ ಮರುನಾಮಕರಣ ಮಾಡುವಂತೆ ಸಚಿವ ರಾಮಲಿಂಗಾರೆಡ್ಡಿ ಕೋರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




