AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಟು ವರ್ಷ ಕಳೆದರೂ ಮುಗಿಯದ ಎತ್ತಿನಹೊಳೆ ಕಾಮಗಾರಿ; 23 ಸಾವಿರ ಕೋಟಿ ರೂ. ತಲುಪಿದ ಯೋಜನೆಯ ವೆಚ್ಚ

ಮುಂದಿನ ವರ್ಷದೊಳಗೆ ಮೊದಲ ಹಂತದಲ್ಲಿ ನೀರು ಹರಿಯದಿದ್ದರೆ ಇದೊಂದು ನಿರರ್ಥಕ ಯೋಜನೆ ಆಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಅಭೀಪ್ರಾಯಪಟ್ಟಿದ್ದಾರೆ.

ಎಂಟು ವರ್ಷ ಕಳೆದರೂ ಮುಗಿಯದ ಎತ್ತಿನಹೊಳೆ ಕಾಮಗಾರಿ; 23 ಸಾವಿರ ಕೋಟಿ ರೂ. ತಲುಪಿದ ಯೋಜನೆಯ ವೆಚ್ಚ
ಎಂಟು ವರ್ಷ ಕಳೆದರೂ ಮುಗಿಯದ ಎತ್ತಿನಹೊಳೆ ಕಾಮಗಾರಿ
TV9 Web
| Updated By: preethi shettigar|

Updated on: Sep 07, 2021 | 12:15 PM

Share

ಹಾಸನ: ಎತ್ತಿನಹೊಳೆ ಯೋಜನೆ ರಾಜ್ಯದ ಐದು ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ. ಆದರೆ ಆರಂಭವಾದಾಗ 8300 ಕೋಟಿ ರೂ. ಇದ್ದ ಯೋಜನೆಯ ವೆಚ್ಚ ಈಗ ಬರೊಬ್ಬರಿ 23 ಸಾವಿರ ಕೋಟಿ ರೂ. ಆಗಿದೆ. ಮೂರುಪಟ್ಟು ವೆಚ್ಚ ಹೆಚ್ಚಾದರೂ ಕಾಮಗಾರಿ ಮಾತ್ರ ಮುಗಿಯುವ ಯಾವುದೇ ಲಕ್ಷಣಗಳು ಕಾಣತ್ತಿಲ್ಲ. ನಾಲ್ಕು ಜಲಸಂಪನ್ಮೂಲ ಸಚಿವರು ಬದಲಾದರೂ ಕಾಮಗಾರಿ ವೇಗ ಪಡೆಯುತ್ತಿಲ್ಲ. ಇಂದು ಕಾಮಗಾರಿ ಪರಿಶೀಲನೆ ನಡೆಸಿದ ಈಗಿನ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮುಂದಿನ ತಿಂಗಳು ಮೊದಲ ಹಂತದ ಕಾಮಗಾರಿಯ ಪ್ರಯೋಗಿಕ ಚಾಲನೆ ಎಂದು ಘೋಷಣೆ ಮಾಡಿದ್ದು, ನೀರಿನ ನಿರೀಕ್ಷೆಯಲ್ಲಿದ್ದವರಿಗೆ ಹೊಸ ಭರವಸೆ ಮೂಡಿದೆ. ಕಾಮಗಾರಿ ಇನ್ನಾದರೂ ವೇಗ ಪಡೆಯುತ್ತಾ ಎಂದು ಇಲ್ಲಿನ ಜನ ಎದುರು ನೋಡುತ್ತಿದ್ದಾರೆ.

2012ರಲ್ಲಿ ಆರಂಭಗೊಂಡಿದ್ದ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ನದಿ ತಿರುವು ಯೋಜನೆಯಾದ ಎತ್ತಿನಹೊಳೆ ಯೋಜನೆ ಯಾವಾಗ ಆರಂಭವಾಗುತ್ತದೆ ಎಂದು ಕಾದಿದ್ದ ಜನರಿಗೆ ಇಂದು ಕಾಮಗಾರಿ ಪರಿಶೀಲನೆ ನಡೆಸಿದ ಜಲಸಂಪನ್ಮೂಲ ಸಚಿವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ತಿಂಗಳು ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಾಯೋಗಿಕ ಚಾಲನೆ ಸಿಗುತ್ತದೆ ಎಂದು ಘೋಷಣೆ ಮಾಡಿದ್ದು, ಉಳಿದ ಕಾಮಗಾರಿ ಬೇಗ ಮುಗಿಯುವ ಭರವಸೆ ಸಿಕ್ಕಂತಾಗಿದೆ.

ಇಂದು ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, 2012ರಲ್ಲಿ 8300 ಕೋಟಿ ಅನುದಾನದಿಂದ ಆರಂಭಗೊಂಡ ಯೋಜನೆ ಕಾಮಗಾರಿ ವಿಳಂಬದಿಂದ ಇಂದು 23 ಸಾವಿರ ಕೋಟಿವರೆಗೂ ಬಂದು ನಿಂತಿದೆ ಇನ್ನೂ ತಡ ಆಗಬಾರದು, ಮೊದಲ ಹಂತದ ಯೋಜನೆಯಲ್ಲಿ 36 ಎಕರೆ ಭೂ ಸ್ವಾಧೀನ ಮಾತ್ರ ಬಾಕಿ ಇದೆ. ಇಂದು ಡಿಸಿ ಜೊತೆಗೆ ಸಭೆ ಮಾಡಿದ್ದು, ವಿವಾದ ಇರುವ ಭೂಮಿಯ ಪರಿಹಾರ ನಿಧಿಯನ್ನು ಕೋರ್ಟ್​ನಲ್ಲಿ ಡೆಪಾಸಿಟ್ ಮಾಡಿ ನಮಗೆ ಭೂಮಿ ಸ್ವಾಧೀನ ಪಡಿಸಿಕೊಡಲು ಸೂಚನೆ ನೀಡಲಾಗಿದೆ. ಭೂ ಪರಿಹಾರ ನೀಡುವುದಕ್ಕೆ ನಮಗೆ ಅನುದಾನದ ಕೊರತೆ ಇಲ್ಲ. ಡಿಸಿ ಖಾತೆಯಲ್ಲಿ 200 ಕೋಟಿ ಹಣ ಇದೆ. ಇನ್ನು ಮೊದಲ ಹಂತದ ಕಾಮಗಾರಿಗೆ ವಿದ್ಯುತ್ ಸಂಪರ್ಕವೂ ಈ ತಿಂಗಳ ಅಂತ್ಯಕ್ಕೆ ಮುಗಿಯಲಿದ್ದು, ಮುಂದಿನ ತಿಂಗಳು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆ ನಿಡುವುದಾಗಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಘೊಷಣೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ಸುರಿಯುವ ಮಳೆಯಿಂದ ಹಲವು ನದಿ ತೊರೆಗಳು ತುಂಬಿ ಹರಿಯುತ್ತವೆ. ಈ ನೀರೆಲ್ಲಾ ವ್ಯರ್ಥವಾಗಿ ಸಮುದ್ರ ಸೇರುವುದು ಅಧ್ಯಯನದಿಂದ ತಿಳಿದಿದ್ದರಿಂದಲೇ ಮಳೆಗಾಲದಲ್ಲಿ ಇಲ್ಲಿ ಸಿಗುವ 24 ಟಿಎಂಸಿ ನೀರನ್ನು ಮೊದಲನೆ ಹಂತದಲ್ಲಿ ಪೈಪ್ ಲೈನ್ ಮೂಲಕ ಹೆಬ್ಬನಹಳ್ಳಿವರೆಗೆ ನೀರು ಹರಿಸುವುದು ಅಲ್ಲಿಂದ ದೊಡ್ಡ ಕಾಲುವೆಗಳ ಮೂಲಕ ತುಮಕೂರಿಗೆ ನೀರು ಹರಿಸಿ ಅಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿಗೆ ಕುಡಿಯುವ ನೀರು ಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಆದರೆ ಇಷ್ಟು ಪ್ರಮಾಣದ ನೀರು ಸಿಗುತ್ತಾ ಎನ್ನುವುದು ಹಲವರ ಪ್ರಶ್ನೆಯಾಗಿದ್ದು, ಈ ಬಗ್ಗೆ ಉತ್ತರಿಸಿದ ಸಚಿವರಾದ ಗೋವಿಂದ ಕಾರಜೋಳ, ಈ ಬಗ್ಗೆ ಗೊಂದಲ ಬೇಡ, ನೀರು ಸಿಗುತ್ತದೆ ಎನ್ನುವ ಮಾಹಿತಿ ಇದೆ ಅದನ್ನೇ ನಾನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಉತ್ತಮ ಮಳೆ ಆಗದಿದ್ದರೆ ಇಷ್ಟು ಪ್ರಮಾಣದ ನೀರು ಸಿಗದೇ ಇರಬಹುದು ಎನ್ನುವ ಅರ್ಥದಲ್ಲಿ ಮಾತನಾಡುತ್ತಲೇ ಈ ಯೋಜನೆ ಖಂಡಿತಾ ಈ ಭಾಗದ ಜನರಿಗೆ ಅನುಕೂಲ ಆಗಲಿದೆ ಎಂದು ಸಚಿವರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಇನ್ನು ಸಚಿವರ ಜೊತೆಗೆ ಆಗಮಿಸಿದ್ದ ಯೋಜನೆ ಫಲಾನುಭವಿ ಪ್ರದೇಶಗಳಾದ ಹಾಸನ ಜಿಲ್ಲೆಯ ಬೇಲೂರಿನ ಶಾಸಕ ಲಿಂಗೇಶ್ ಹಾಗು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೂಡ ಸಚಿವರಿಗೆ ಕಾಮಗಾರಿ ಬೇಗನೆ ಮುಗಿಸಲು ಹೇಳಿದರು.

ಮೊದಲ ಹಂತದ ಕಾಮಗಾರಿಗೆ ಚಾಲನೆ ಅಂದರೆ ಎಲ್ಲಾ ಸಿದ್ಧಗೊಂಡಿರುವ ಈ ಸ್ಥಳದಲ್ಲಿ ಮೋಟರ್ ಚಾಲನೆ ಮಾಡಿ ನೀರೆತ್ತುವ ಕಾರ್ಯಕ್ಕೆ ಚಾಲನೆ ಕೊಡುವುದು. ಆದರೆ ನೀರು ಹರಿಸಲು ಬೇಕಾದ ಕೆಲಸ ಇನ್ನೂ ಆಗಬೇಕಿದೆ. ಇನ್ನೂ ಮೊದಲನೇ ಹಂತದಲ್ಲೇ 9 ಕಿಲೋಮೀಟರ್ ಪೈಪ್ ಲೈನ್ ಅಳವಡಿಕೆ ಆಗಬೇಕಿದ್ದು, ಯೋಜನೆ ಆಗುತ್ತದೆ ಎನ್ನುವ ಭರವಸೆ ನಮಗಿದೆ. ಮುಂದಿನ ವರ್ಷದೊಳಗೆ ಮೊದಲ ಹಂತದಲ್ಲಿ ನೀರು ಹರಿಯದಿದ್ದರೆ ಇದೊಂದು ನಿರರ್ಥಕ ಯೋಜನೆ ಆಗಲಿದೆ ಎಂದು ಶಾಸಕ ಶಿವಲಿಂಗೇಗೌಡ ಅಭೀಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಪಶ್ಚಿಮಘಟ್ಟದಲ್ಲಿ ಸುರಿಯುವ ಮಳೆಯ ನೀರು ಹರಿದು ಸಮುದ್ರ ಸೇರುವುದನ್ನು ತಡೆದು ವಿರುದ್ಧ ದಿಕ್ಕಿಗೆ ಹರಿಸುವ ಹಾಸನದ ಯೋಜನೆ ಹಲವು ಅನುಮಾನಗಳ ನಡುವೆ, ವಿರೋಧಾಬಾಸಗಳ ನಡುವೆ ಆರಂಭಗೊಂಡು 8 ವರ್ಷದಿಂದ ನಡೆಯುತ್ತಲೇ ಇದೆ. ಅದಕ್ಕಾಗಿ 23 ಸಾವಿರ ಕೋಟಿ ರೂ. ಹಣ ಖರ್ಚುಮಾಡಲಾಗುತ್ತಿದೆ. ಅಂದುಕೊಂಡಂತೆ ಆಗಿ, ಬರಡು ಭೂಮಿಗೆ ನೀರು ಹರಿಯಲಿ ಎನ್ನುವುದು ಎಲ್ಲರ ಬಯಕೆ.

ವರದಿ: ಮಂಜುನಾಥ್ ಕೆ.ಬಿ ಇದನ್ನೂ ಓದಿ: ಎತ್ತಿನಹೊಳೆಗೆ ಭೂಮಿ ಕೊಟ್ಟು ಪರಿಹಾರದ ಭರವಸೆಯಲ್ಲೇ ಕಂಗೆಟ್ಟ ಅನ್ನದಾತರು, ಇತ್ತ ಯೋಜನೆ ಇಲ್ಲ.. ಪರಿಹಾರನೂ ಇಲ್ಲ..!

ಶಿರಾಡಿಘಾಟ್‌ನಲ್ಲಿ 23 ಕಿಲೋಮೀಟರ್ ಸುರಂಗ ಮಾರ್ಗ; ಕೇಂದ್ರದಿಂದ ಸಿಕ್ತು ಗ್ರೀನ್ ಸಿಗ್ನಲ್..