AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಗಾರಪೇಟೆ ಪುರಸಭೆ ಎದುರು ಬಿಜೆಪಿ-ಕಾಂಗ್ರೆಸ್​ ನಾಯಕರ ಹೈಡ್ರಾಮ: ನಿಷೇಧಾಜ್ಞೆ ಲೆಕ್ಕಿಸದ ಕಾರ್ಯಕರ್ತರು

ಕಾರ್ಯಕ್ರಮವನ್ನು ಏಕಾಏಕಿ ರದ್ದುಪಡಿಸಿದ್ದು ಖಂಡಿಸಿ ಮಾಜಿ ಸ್ಪೀಕರ್ ರಮೇಶ್​ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದರು

ಬಂಗಾರಪೇಟೆ ಪುರಸಭೆ ಎದುರು ಬಿಜೆಪಿ-ಕಾಂಗ್ರೆಸ್​ ನಾಯಕರ ಹೈಡ್ರಾಮ: ನಿಷೇಧಾಜ್ಞೆ ಲೆಕ್ಕಿಸದ ಕಾರ್ಯಕರ್ತರು
ಬಂಗಾರಪೇಟೆ ಪುರಸಭೆ ಕಟ್ಟಡ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 02, 2022 | 10:59 PM

Share

ಕೋಲಾರ: ಜಿಲ್ಲೆಯ ಬಂಗಾರಪೇಟೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಪುರಸಭೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮವು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಕೊನೇ ಗಳಿಗೆಯಲ್ಲಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ರದ್ದಾಗಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೊನೆಗೆ ಅಂಬೇಡ್ಕರ್ ಫೋಟೊಗೆ ಹಾರ ಹಾಕಿ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರು ಸಂಘರ್ಷ ನಡೆಸಬಹುದು ಎಂದು ಮೊದಲೇ ಊಹಿಸಿದ್ದ ತಾಲ್ಲೂಕು ಆಡಳಿತ ನಗರದಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹೇರಿದ್ದರೂ, ಎರಡೂ ಪಕ್ಷಗಳ ಪ್ರಮುಖ ನಾಯಕರೇ ನಿಷೇಧಾಜ್ಞೆ ಉಲ್ಲಂಘಿಸಿದರು.

ಬಂಗಾರಪೇಟೆಯ ಕಾಂಗ್ರೆಸ್ ಶಾಸಕ ಎಸ್​.ಎನ್.ನಾರಾಯಣಸ್ವಾಮಿ ನಿಗದಿಪಡಿಸಿದ್ದ ಉದ್ಘಾಟನಾ ಕಾರ್ಯಕ್ರಮವನ್ನು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ರದ್ದುಪಡಿಸಿದ್ದರು. ಇದು ಬಂಗಾರಪೇಟೆಯಲ್ಲಿ ಹಲವು ಸರಣಿ ಬೆಳವಣಿಗೆಗಳಿಗೆ ಕಾರಣವಾಯಿತು. ಕಾರ್ಯಕ್ರಮವನ್ನು ಏಕಾಏಕಿ ರದ್ದುಪಡಿಸಿದ್ದು ಖಂಡಿಸಿ ಮಾಜಿ ಸ್ಪೀಕರ್ ರಮೇಶ್​ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದರು. ಗಲಾಟೆ ಸಾಧ್ಯತೆ ಹಿನ್ನೆಲೆ ತಹಶೀಲ್ದಾರ್ ಎಂ.ದಯಾನಂದ್ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಫೆ 1ರಿಂದ ಫೆ 4ರ ಮಧ್ಯರಾತ್ರಿಯವರೆಗೂ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಶಾಸಕ ನಾರಾಯಣಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಗೊಂದಲದಲ್ಲಿಯೇ ಸಾಂಕೇತಿಕವಾಗಿ ಬಂಗಾರಪೇಟೆ ಪುರಸಭೆ ಕಟ್ಟಡವನ್ನು ಮಾಜಿ ಸ್ಪೀಕರ್​ ರಮೇಶ್​ ಕುಮಾರ್, ಶಾಸಕ ನಾರಾಯಣಸ್ವಾಮಿ, ವಿಧಾನ ಪರಿಷತ್​ ಸದಸ್ಯ ಅನಿಲ್ ಕುಮಾರ್ ಅಂಬೇಡ್ಕರ್ ಚಿತ್ರಪಟಕ್ಕೆ ಹಾರ ಹಾಕುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಸಾಂಕೇತಿಕ ಉದ್ಘಾಟನೆ ಮುಗಿದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು.

ಶಾಸಕ-ತಹಶೀಲ್ದಾರ್ ಮುಸುಕಿನ ಗುದ್ದಾಟ ಬಂಗಾರಪೇಟೆಯಲ್ಲಿ ಶಾಸಕ ಮತ್ತು ತಹಶೀಲ್ದಾರ್ ನಡುವಣ ಮುಸುಕಿನ ಗುದ್ದಾಟ ಜನರ ನಡುವೆ ಚರ್ಚೆಯ ವಿಷಯವಾಗಿದೆ. ತಹಶೀಲ್ದಾರ್ ಎಂ.ದಯಾನಂದ್ ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಡುವಣ ಮುಸುಕಿನ ಗುದ್ದಾಟದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಬಂಗಾರಪೇಟೆ ತಹಶೀಲ್ದಾರ್ ಆಗಿದ್ದ ಕೆ.ಬಿ.ಚಂದ್ರಶೇಖರ್ ಅವರ ಕೊಲೆಯಾದ ನಂತರ ಬಂದ ತಹಶೀಲ್ದಾರ್ ಎಂ.ದಯಾನಂದ್ ಅವರ ವಿರುದ್ಧ ಶಾಸಕರು ಹಲವು ಸಂದರ್ಭಗಳಲ್ಲಿ ಹರಿಹಾಯ್ದಿದ್ದಾರೆ.

ತಾಲ್ಲೂಕು ಆವರಣದಲ್ಲಿಯೂ ತಹಶೀಲ್ದಾರ್ ಭಿತ್ತಿಪತ್ರವೊಂದನ್ನು ಅಂಟಿಸಿ, ತಾಲ್ಲೂಕು ಕಚೇರಿಯಿಂದ, ತಹಶೀಲ್ದಾರರಿಂದ ತೊಂದರೆಯಾದರೆ ತಮ್ಮನ್ನು ಸಂಪರ್ಕಿಸುವಂತೆ ಶಾಸಕರು ಒಕ್ಕಣೆ ಬರೆಸಿದ್ದರು. ಶಾಸಕರ ಹಿಂಬಾಲಕರ ಮೇಲೆ ತಹಶೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಬಾಗಲಕೋಟೆಯಲ್ಲಿ 608 ಮಂದಿ ರೌಡಿಶೀಟರ್​ಗಳ ಕೇಸ್ ತೆರವು; ಬಂಗಾರಪೇಟೆಯಲ್ಲಿ ಫೆ.4ರ ವರೆಗೆ ನಿಷೇಧಾಜ್ಞೆ ಜಾರಿ ಇದನ್ನೂ ಓದಿ: Puneeth Rajkumar: ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್​ ರಾಜ್​ಕುಮಾರ್​