AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ಎರಡೂ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. 2 ದಿನಗಳ ಅಧಿಕೃತ ಭೇಟಿಗಾಗಿ ಭಾನುವಾರ ಮಾಸ್ಕೋ ತಲುಪಿರುವ ಸಚಿವ ಜೈಶಂಕರ್, ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಸಹಕಾರವು ಅತ್ಯಂತ ಗಮನಾರ್ಹವಾಗಿ ಬೆಳೆದಿದೆ ಎಂದು ತಿಳಿಸಿದರು.

ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್
Putin With S JaishankarImage Credit source: TV9
ಸುಷ್ಮಾ ಚಕ್ರೆ
|

Updated on: Aug 24, 2026 | 8:36 PM

Share

ಮಾಸ್ಕೋ, ಆಗಸ್ಟ್ 24: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಇಂದು (ಆಗಸ್ಟ್ 24) ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯಗಳು ಮತ್ತು ವೈಯಕ್ತಿಕ ಸಂದೇಶವನ್ನು ರಷ್ಯಾದ ಅಧ್ಯಕ್ಷ ಪುಟಿನ್​ಗೆ ತಲುಪಿಸಿದರು. 2 ದಿನಗಳ ಅಧಿಕೃತ ಭೇಟಿಗಾಗಿ ಭಾನುವಾರ ಮಾಸ್ಕೋ ತಲುಪಿದ ಜೈಶಂಕರ್ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಚರ್ಚಿಸಿದರು.

ಸೆಪ್ಟೆಂಬರ್ 12ರಿಂದ 13ರಂದು ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ನವದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನವೇ ಈ ಭೇಟಿ ನಡೆದಿದೆ. ಭಾರತ ಮತ್ತು ರಷ್ಯಾ ತಮ್ಮ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಮುಂದಾಗಿರುವುದರಿಂದ ಈ ಸಭೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದನ್ನೂ ಓದಿ: ವಿದೇಶಿ ಒತ್ತಡಕ್ಕೆ ಭಾರತ ಬಗ್ಗುವುದಿಲ್ಲ; ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಟ್ರಂಪ್‌ಗೆ ಪುಟಿನ್ ತಿರುಗೇಟು

ಪುಟಿನ್ ಜೊತೆ ಭೇಟಿಯ ವೇಳೆ ಮಾತನಾಡಿದ ಸಚಿವ ಜೈಶಂಕರ್, ಭಾರತ ಮತ್ತು ರಷ್ಯಾ ಬಲವಾದ ಸಹಕಾರದ ಚಿತ್ರಣವನ್ನು ಹೊಂದಿವೆ ಎಂದು ತಿಳಿಸಿದರು. ವ್ಯಾಪಾರ, ಇಂಧನ, ಗೊಬ್ಬರಗಳು, ಪರಮಾಣು ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಆರ್ಥಿಕ ಬಾಂಧವ್ಯವನ್ನು ಅವರು ಎತ್ತಿ ತೋರಿಸಿದರು. “ನಮ್ಮ ಆರ್ಥಿಕ ಸಹಕಾರ, ವ್ಯಾಪಾರ, ಇಂಧನ, ರಸಗೊಬ್ಬರ, ಪರಮಾಣು ಮತ್ತು ಇತರ ಕ್ಷೇತ್ರಗಳ ಕುರಿತು ವಿವರವಾಗಿ ಮಾತನಾಡಲು ನಾನು ಸಂತೋಷಪಡುತ್ತೇನೆ. ಒಟ್ಟಾರೆಯಾಗಿ, ನಮ್ಮ ಆರ್ಥಿಕ ಸಹಕಾರವು ಅತ್ಯಂತ ಗಮನಾರ್ಹವಾಗಿ ಬೆಳೆದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಜೈಶಂಕರ್ ಹೇಳಿದರು.

ಎಸ್‌ಸಿಒ (SCO) ಶೃಂಗಸಭೆಯಲ್ಲಿ ಪುಟಿನ್ ಅವರನ್ನು ಭೇಟಿಯಾಗಲು ಮತ್ತು ನಂತರ ಬ್ರಿಕ್ಸ್ ಶೃಂಗಸಭೆಗಾಗಿ ಅವರನ್ನು ಭಾರತಕ್ಕೆ ಸ್ವಾಗತಿಸಲು ಪ್ರಧಾನಿ ಮೋದಿ ಕಾಯುತ್ತಿದ್ದಾರೆ ಎಂದು ಸಚಿವ ಜೈಶಂಕರ್ ತಿಳಿಸಿದರು. “ಪ್ರಧಾನಿ ಮೋದಿಯವರು ಎಸ್‌ಸಿಒ ಶೃಂಗಸಭೆಯಲ್ಲಿ ನಿಮ್ಮನ್ನು ಭೇಟಿಯಾಗಲು, ನಂತರ ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಸ್ವಾಗತಿಸಲು ಮತ್ತು ನಿಮ್ಮಿಬ್ಬರ ಅನುಕೂಲಕ್ಕೆ ತಕ್ಕಂತೆ ವಾರ್ಷಿಕ ಶೃಂಗಸಭೆಯನ್ನು ನಡೆಸಲು ಎದುರುನೋಡುತ್ತಿದ್ದಾರೆ” ಎಂದು ಪುಟಿನ್​ಗೆ ಸಚಿವ ಜೈಶಂಕರ್ ಹೇಳಿದರು.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧಕ್ಕೆ ಬೀಳುತ್ತಾ ತೆರೆ? ಶಾಂತಿ ಮಾತುಕತೆಯ ಸುಳಿವು ನೀಡಿದ ಪುಟಿನ್

ಭಾರತ ಮತ್ತು ರಷ್ಯಾ ತಮ್ಮ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಮುಂದಾಗಿರುವುದರಿಂದ ಈ ಭೇಟಿಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ವರ್ಷ ರಷ್ಯಾ ಮತ್ತು ಭಾರತ ನಡುವಿನ ವ್ಯಾಪಾರ ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಕ್ಷ ಪುಟಿನ್ ಹೇಳಿದರು. ಅಲ್ಲದೆ, ರಷ್ಯಾ ಭಾರತಕ್ಕೆ ರಸಗೊಬ್ಬರ ಪೂರೈಕೆಯನ್ನು ಹೆಚ್ಚಿಸುತ್ತಿದ್ದು, ಮುಂದಿನ ದಿನಗಳಲ್ಲೂ ಇದನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us