ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಸೋನಿ ಟಿವಿಯಲ್ಲಿ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ’ ಸೀಸನ್ 13 ಅನ್ನು ನೀವು ವೀಕ್ಷಿಸುತ್ತಿದ್ದೀರಾ? ನಿಮಗೆಲ್ಲ ಗೊತ್ತಿರುವ ಹಾಗೆ ಅವರು ಅದ್ಭುತವಾಗಿ ಮತ್ತು ಅಷ್ಟೇ ಮನರಂಜನಾತ್ಮಕವಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇದರಲ್ಲಿ ಕೆಲ ಸಲ ಸೆಲಿಬ್ರಿಟಿಗಳು ಸಹ ಭಾಗವಹಿಸಿ ಯಾವುದಾದರೂ ಒಂದು ಚಾರಿಟಿಗೆ ಹಣ ಗೆದ್ದುಕೊಡುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿ ಯಾರೇ ಅಗಿರಲಿ ಬಿಗ್ ಬಿ ಅವರೊಂದಿಗೆ ಬಹಳ ಅತ್ಮೀಯತೆಯಿಂದ, ಆದರಪೂರ್ವಕವಾಗಿ ಮಾತಾಡುತ್ತಾರೆ. ಹಾಗೆಯೇ, ಸ್ಪರ್ಧಿಗಳ ಕಾಲೆಳೆಯುವುದರಲ್ಲಿ ಅವರು ನಿಸ್ಸಿಮರು. ಅದರೆ ಅದು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ. ಕೆಲವು ಸಲ ಸ್ಫರ್ಧಿಗಳು ಸಹ ಬಚ್ಚನ್ ಅವರ ಕಾಲೆಳೆಯುತ್ತಾರೆ. ಬಾಲಿವುಡ್ ಶೆಹೆನ್ಷಾ ಅದನ್ನು ಸ್ಪೋರ್ಟಿವ್ ಆಗಿ ಸ್ವೀಕರಿಸುತ್ತಾರೆ. ಹಿಂದೆ ಒಬ್ಬ ಸ್ಪರ್ಧಿ ರೇಖಾ ಅವರ ಬಗ್ಗೆ ಅಮಿತಾಭ್ಗೆ ಪ್ರಶ್ನೆ ಕೇಳಿ ಅವರನ್ನು ಮುಜುಗರಕ್ಕೀಡು ಮಾಡಿದ್ದ!
ಬುಧವಾರದಂದು ನಡೆದ ಎಪಿಸೋಡ್ನಲ್ಲಿ ಮೂವರು ಸ್ಪರ್ಧಿಗಳನ್ನು ಅಮಿತಾಭ್ ಹೋಸ್ಟ್ ಮಾಡಿದರು. ಕಿನ್ನೋರಿ ಜೋಶಿ ಅನ್ನುವವರು ಮಂಗಳವಾರದ ರೋಲ್ ಓವರ್ ಸ್ಪರ್ಧಿಯಾಗಿದ್ದರು. ಉತ್ತಮವಾಗಿ ಆಡುತ್ತಿದ್ದ ಅವರು ರೂ 3.2 ಲಕ್ಷ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳವಂತಾಯಿತು. ಅವರು ನಿರ್ಗಮಿಸಿದ ನಂತರ ಕಾನ್ಪುರ್ನ ಅಶುತೋಷ್ ಶುಕ್ಲಾ ಅನ್ನುವವರು ಹಾಟ್ ಸೀಟ್ ಗೆ ಬಂದರು. ಇವರಲ್ಲಿದ್ದ ಆತ್ಮವಿಶ್ವಾಸ ಅಮಿತಾಭ್ ಅವರನ್ನು ಇಂಪ್ರೆಸ್ ಮಾಡಿದ್ದು ಸುಳ್ಳಲ್ಲ.
ಅಶುತೋಷ್ ಅವರೊಂದಿಗೆ ಕಂಪ್ಯಾನಿಯನ್ ಆಗಿ ಅವರ ಪತ್ನಿ ಬಂದಿದ್ದರು. ಸ್ಪರ್ಧಿಗಳ ಕಾಲೆಳೆಯುವ ಅವಕಾಶವನ್ನು ಯಾವತ್ತೂ ಬಿಡದ ಅಮಿತಾಬ್ ಅವರು ಅಶುತೋಷ್ ಅವರಿಗೆ ತಮ್ಮ ದಾಂಪತ್ಯ ಜೀವನ ಹೇಗೆ ನಡೆದಿದೆ ಅಂತ ಕೇಳಿದರು.
ಅದಕ್ಕೆ ಅಶುತೋಷ್, ವಿನಾಕಾರಣ ಪದೇಪದೆ ಫೋನ್ ಮಾಡಿ, ಎಲ್ಲಿದ್ದೀರಿ, ಏನು ಮಾಡ್ತಾ ಇದ್ದೀರಿ ಎಂಬ ಪ್ರಶ್ನೆಗಳನ್ನು ಕೇಳುತ್ತಾ ಕಿರಿಕಿರಿ ಮಾಡುತ್ತಿರುತ್ತಾಳೆ ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಅಮಿತಾಭ್ ಅವರು, ಎಲ್ಲರ ಮನೆಯಲ್ಲೂ ಇದೇ ಕತೆ ಎಂದು ಹೇಳಿ, ಅಶುತೋಷ್ ಪರ ವಹಿಸಿಕೊಂಡು ಮಾತಾಡಿದರು.
ನಂತರ ಅಶುತೋಷ್ ಅವರ ಪತ್ನಿ, ತನ್ನ ಪತಿ ರಜೆ ತಗೆದುಕೊಳ್ಳವುದಿಲ್ಲ, ತನ್ನೊಂದಿಗೆ ಹೆಚ್ಚು ಸಮಯ ಕಳೆಯುವುದಿಲ್ಲ ಅಂತ ದೂರಿದಾಗ ಅಮಿತಾಬ್ ಅವರು ಆಕೆಯ ಪರ ವಹಿಸಿಕೊಂಡು ಮಾತಾಡಲಾರಂಭಿಸಿದರು. ಆಗ ಅಶುತೋಷ್, ‘ಸರ್ ನೀವು ತುಂಬಾ ಡಿಪ್ಲೊಮ್ಯಾಟಿಕ್ ಆಗಿ ಮಾತಾಡ್ತಾ ಇದ್ದೀರಿ, ಅಸಲಿಗೆ ನೀವು ಯಾರ ಪರ?’ ಎಂದು ಕೇಳಿದ ನಂತರ ಬಚ್ಚನ್, ‘ಯಾವತ್ತಿಗೂ ಪತ್ನಿಯರೇ ಕರೆಕ್ಟ್’ ಅಂತ ಹೇಳಿದಾಗ ಆಡಿಯನ್ಸ್ನಲ್ಲಿದ್ದ ಜನ ಜೋರಾಗಿ ನಗತೊಡಗಿದರು.
ಅಶುತೋಷ್ ಸಹ ಅಂತಿಮವಾಗಿ ರೂ 3.2 ಲಕ್ಷ ಗೆದ್ದು ನಿರ್ಗಮಿಸಿದರು.
ಬುಧವಾರ ಹಾಟ್ ಸೀಟ್ಗೆ ಬಂದ ಮೂರನೇ ಸ್ಪರ್ಧಿಯ ಹೆಸರು ಕಲ್ಪನಾ. ಇವರು ರೋಲ್ ಓವರ್ ಕಾಂಟೆಸ್ಟಂಟ್ ಆಗಿದ್ದು ಅಮಿತಾಭ್ ಗುರುವಾರ ಇವರೊಂದಿಗೆ ಆಟ ಮುಂದುವರಿಸಲಿದ್ದಾರೆ.
ಇದನ್ನೂ ಓದಿ: KBC 13: ರಣವೀರ್ ನೀಡಿದ್ದ ಮಾತನ್ನು ನಡೆಸಿಕೊಟ್ಟಿಲ್ಲ ಎಂದು ಅಮಿತಾಭ್ ಬಳಿ ದೂರಿದ ದೀಪಿಕಾ; ಅಷ್ಟಕ್ಕೂ ಕಂಪ್ಲೇಂಟ್ ಏನು?