ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು: ಡಿಕೆ ಶಿವಕುಮಾರ್ಗೆ ಪ್ರಮೋದಾದೇವಿ ಟಾಂಗ್
ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ ಏನಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ಈ ವಿಚಾರವಾಗಿ ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು. ಹಿಂದೂ ಧಾರ್ಮಿಕ ವಿಧಿ ವಿಧಾನದಿಂದ ಪೂಜೆ ನಡೆಯುತ್ತದೆ ಎಂದಿದ್ದಾರೆ.

ಮೈಸೂರು, ಆಗಸ್ಟ್ 30: ದಸರಾಗೆ (Dasara) ತಯಾರಿ ನಡೆಯುತ್ತಿದೆ. ಆದರೆ ನಾಡಹಬ್ಬಕ್ಕೆ ಉದ್ಘಾಟಕರ ಆಯ್ಕೆ ವಿಷಯ ಮಾತ್ರ ಕಿಚ್ಚು ಹೊತ್ತಿಸಿದೆ. ಬೂಕರ್ ಪ್ರಶಸ್ತಿ ವಿಜೇತೆ, ಮುಸ್ಲಿಂ ಸಮುದಾಯದ ಬಾನು ಮುಷ್ತಾಕ್ರ ಆಯ್ಕೆ ಖಂಡಿಸಿ ಬಿಜೆಪಿ ಸೇರಿ ಕೆಲ ಹಿಂದೂಪರ ಸಂಘಟನೆಗಳು ಕಿಡಿಕಾರುತ್ತಿವೆ. ಈ ಮಧ್ಯೆ ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ ಏನಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಕುರಿತಾಗಿ ಮಾತನಾಡಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar), ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು ಎಂದು ಹೇಳಿದ್ದಾರೆ.
ಚಾಮುಂಡಿ ಹಿಂದೂ ಮತ್ತು ಯದುವಂಶದ ಮನೆ ದೇವರು
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏನು ಹೇಳಬೇಕೋ ಎಲ್ಲವನ್ನೂ ನಾನು ಪತ್ರದಲ್ಲೇ ಹೇಳಿದ್ದೇನೆ. ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದ್ದು ಎಂದು ಪತ್ರದಲ್ಲಿ ಹೇಳಿದ್ದೇನೆ. ದೇವಸ್ಥಾನ ಹಿಂದೂ ಧಾರ್ಮಿಕ ಆಚರಣೆಯಲ್ಲೇ ನಡೆಯುತ್ತಿದೆ. ಚಾಮುಂಡಿ ಹಿಂದೂ ದೇವರು, ಯದುವಂಶದ ಮನೆ ದೇವರು. ಯದುವಂಶಕ್ಕೆ ಚಾಮುಂಡಿದೇವಿ ಧಾರ್ಮಿಕ ತಾಯಿ ಇದ್ದಂತೆ. ರಾಜಕಾರಣಿಗಳ ಏನೂ ಬೇಕಾದರು ಹೇಳಲಿ. ರಾಜಕಾರಣಿಗಳು ಹೇಳಿದ ತಕ್ಷಣ ಎಲ್ಲವೂ ಆಗಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಾನು ಮುಷ್ತಾಕ್ ತಮ್ಮ 2023ರ ಹೇಳಿಕೆಗೆ ಸ್ಪಷ್ಟನೆ ನೀಡಲಿ ಅಂತ ಹೇಳಿ ಗೊಂದಲ ಮೂಡಿಸಿದ ಯದುವೀರ್
ದೇವಸ್ಥಾನ ವಿಚಾರದಲ್ಲಿ ಕೋರ್ಟ್ನಲ್ಲಿ ಹೋರಾಟ ನಡೆಯುತ್ತಿದೆ. ಪ್ರಾಧಿಕಾರ ರಚನೆ ಆದರೂ ಅದು ಅಧಿಕೃತ ಅಲ್ಲ. ಕೋರ್ಟ್ ಆದೇಶ ಬಂದ ಮೇಲೆ ಅಷ್ಟೆ ಎಲ್ಲವೂ ಸ್ಪಷ್ಟ ಆಗುವುದು. 70 ವರ್ಷಗಳಿಂದ ಈ ಹೋರಾಟ ನ್ಯಾಯಾಲಯದಲ್ಲಿ ಇದೆ. ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿ ಕೊಂಡಿದ್ದಕ್ಕೆ ಬೇಸರವಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಆದ ರಾಜಕೀಯವೇ ಸಾಕು
ದಸರಾ ಉದ್ಘಾಟಕರ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದರಲ್ಲಿ ನನ್ನ ಅಭಿಪ್ರಾಯ ಇಲ್ಲ. ಆಹ್ವಾನಿಸಿದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆದ ರಾಜಕೀಯವೇ ಸಾಕು ಆ ವಿಚಾರವನ್ನು ಮುಂದುವರಿಸುವುದು ಬೇಡ ಎಂದಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಮರು, ಇವತ್ತಿಗೂ ಆನೆಗಳಿಗೆ ಅಂಬಾರಿ ಕಟ್ಟೋದು ಮುಸ್ಲಿಂ: ರಜಾಕ್
ಸರ್ಕಾರದ ದಸರಾ ನಮ್ಮ ಪರಂಪರೆ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಸರ್ಕಾರ ಅವರಿಗೆ ಬೇಕಾದ ರೀತಿಯಲ್ಲೇ ದಸರಾ ಮಾಡುತ್ತಾರೆ. ಅಂಬಾರಿ ಕಡೆ ಗಮನ ಕೊಡುವ ಕಾರಣ ನಾನು ಅಲ್ಲಿಗೆ ಹೋಗಲ್ಲ. ನಮ್ಮ ಮನೆಯ ಒಬ್ಬರು ಹೋಗುತ್ತಾರೆ ಅಷ್ಟೇ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







