ಭಾರತ-ಚೀನಾ ಸಂಬಂಧಕ್ಕೆ 3 ಪರಸ್ಪರ ಸೂತ್ರವೇ ದಿಕ್ಸೂಚಿ; ಕ್ಸಿ ಜಿನ್ಪಿಂಗ್ಗೆ ಪ್ರಧಾನಿ ಮೋದಿ ಸಂದೇಶ
ನವದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ನೇಪಥ್ಯದಲ್ಲಿ ಜರುಗಿದ ಈ ಮಹತ್ವದ ದ್ವಿಪಕ್ಷೀಯ ಸಭೆಯಲ್ಲಿ, ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು ಮತ್ತು ಬಾಂಧವ್ಯ ಸುಧಾರಣೆಗೆ 'ಮೂರು ಪರಸ್ಪರ' ತತ್ವಗಳನ್ನು ಅನುಸರಿಸುವುದು ಅತ್ಯಗತ್ಯ ಎಂದು ಪ್ರಧಾನಿ ಒತ್ತಿಹೇಳಿದ್ದಾರೆ. ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸೌಹಾರ್ದಯುತವಾಗಿ ಮರುಸ್ಥಾಪಿಸುವ ಪ್ರಯತ್ನಗಳ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಮಾತುಕತೆಯ ವೇಳೆ ಭಾರತದ ಕಳವಳಗಳನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ನವದೆಹಲಿ, ಸೆಪ್ಟೆಂಬರ್ 15: ನವದೆಹಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ, ಭಾರತ-ಚೀನಾ ಬಾಂಧವ್ಯಕ್ಕೆ 3 ಪರಸ್ಪರ ಸೂತ್ರಗಳೇ ದಿಕ್ಸೂಚಿಯಾಗಬೇಕು ಎಂದು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಭಾರತದ ಭದ್ರತಾ ಕಾಳಜಿಗಳನ್ನು ಪ್ರತಿಪಾದಿಸಿದ್ದು, ಉಭಯ ದೇಶಗಳು ಪರಸ್ಪರ ಗೌರವ, ಪರಸ್ಪರ ಹಿತಾಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆ ಎಂಬ 3 ತತ್ವಗಳಿಗೆ ಬದ್ಧವಾಗಿರಬೇಕು ಎಂದು ಚೀನಾಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಭಾರತ-ಚೀನಾ ಸಂಬಂಧವನ್ನು ಕೇವಲ ಪ್ರಸ್ತುತ ಸನ್ನಿವೇಶಕ್ಕೆ ಸೀಮಿತಗೊಳಿಸದೆ, ಕಾರ್ಯತಂತ್ರ ಹಾಗೂ ದೀರ್ಘಕಾಲೀನ ದೃಷ್ಟಿಕೋನದಿಂದ ನೋಡಲಾಗುವುದು. ಉಭಯ ದೇಶಗಳ ನಡುವಿನ ಭಿನ್ನಾಪ್ರಾಯಗಳು ಯಾವುದೇ ಕಾರಣಕ್ಕೂ ವಿವಾದಗಳಾಗಿ ರೂಪಾಂತರಗೊಳ್ಳಲು ಬಿಡುವುದಿಲ್ಲ. ಗಡಿ ವಿವಾದಕ್ಕೆ ಎರಡೂ ದೇಶಗಳಿಗೆ ಸಮ್ಮತವಾಗುವಂತಹ ನ್ಯಾಯಯುತ ಹಾಗೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುವುದು. ದ್ವಿಪಕ್ಷೀಯ ವಾಣಿಜ್ಯ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಈ ವೇಳೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಎಲ್ಎಸಿಯಲ್ಲಿ ಚೀನಾ ಸೇನಾ ನಿಯೋಜನೆ ಇಳಿಕೆ, ಆದರೂ ಬೆದರಿಕೆ ತಪ್ಪಿಲ್ಲ: ರಕ್ಷಣಾ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಎಚ್ಚರಿಕೆ
ಕಳೆದ ವರ್ಷದ ಆಗಸ್ಟ್ನಲ್ಲಿ ನಡೆದ ತಿಯಾಂಜಿನ್ ಭೇಟಿಯ ನಂತರ ಭಾರತ-ಚೀನಾ ಬಾಂಧವ್ಯದಲ್ಲಿ ಕಂಡುಬಂದಿರುವ ಸುಧಾರಣೆಯನ್ನು ಉಭಯ ನಾಯಕರು ಸ್ವಾಗತಿಸಿದ್ದು, ಯಾವುದೇ ಭಿನ್ನಾಪ್ರಾಯಗಳು ವಿವಾದಗಳಾಗಿ ರೂಪಾಂತರಗೊಳ್ಳಬಾರದು ಎಂದು ಒಪ್ಪಿಕೊಂಡರು.
VIDEO | Responding to a PTI question on whether India is open to the Chinese president’s five-point initiative, MEA spokesperson Randhir Jaiswal says, “These proposals were made in the national statement that was delivered during the BRICS Summit. So, proposals have been made. It… pic.twitter.com/3LqsNiUnpK
— Press Trust of India (@PTI_News) September 15, 2026
ಎರಡೂ ದೇಶಗಳ ನಾಗರಿಕರ ನಡುವಿನ ಪ್ರವಾಸ ಮತ್ತು ಮುಕ್ತ ಸಂಚಾರವನ್ನು ಉತ್ತೇಜಿಸಲಾಗುವುದು. ಉಭಯ ದೇಶಗಳ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಕಾಳಜಿಗಳಿಗೆ ಪರಸ್ಪರ ಚರ್ಚೆಯ ಮೂಲಕ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. ಪ್ರಾದೇಶಿಕ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಜಂಟಿ ಸಹಕಾರವನ್ನು ಹೆಚ್ಚಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಿಕ್ಸ್ ಸಭೆ; ಭಾರತದಲ್ಲಿ ಬದಲಾದ ಚೀನಾ ಭಾಷೆ; ಚಿಕ್ಕ ದೊಡ್ಡ ದೇಶಗಳೆಲ್ಲವೂ ಸಮಾನವೇ ಎಂದ ಷಿ; ಐದು ಉಪಕ್ರಮಗಳ ಘೋಷಣೆ
‘ಕೋರ್’ ವಿಷಯಗಳಿಗೆ ಗೌರವದ ಅಗತ್ಯ:
ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರಧಾನಿಯವರು ಉಭಯ ದೇಶಗಳ ನಡುವಿನ ಭಿನ್ನಾಪ್ರಾಯಗಳನ್ನು ಹಂತ ಹಂತವಾಗಿ ಶಮನಗೊಳಿಸಲು ಮತ್ತು ಭಾರತದ ಭದ್ರತೆ ಹಾಗೂ ಆರ್ಥಿಕತೆಗೆ ಸಂಬಂಧಿಸಿದ ಮೂಲಭೂತ ಕಾಳಜಿಗಳಿಗೆ ಚೀನಾ ಸೂಕ್ತ ಗೌರವ ನೀಡಬೇಕೆಂದು ಪ್ರತಿಪಾದಿಸಿದರು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಉಭಯ ದೇಶಗಳ ಸಂಬಂಧಗಳ ನಿರಂತರ ಸುಧಾರಣೆಗೆ ಮೊದಲ ನಿಯಮವಾಗಿದೆ. ಗಡಿ ಸಂಬಂಧಿತ ಹಳೆಯ ಒಪ್ಪಂದಗಳು ಹಾಗೂ ತಿಳುವಳಿಕೆಗಳನ್ನು ಎರಡೂ ದೇಶಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




