DBT Savings: ನೇರವಾಗಿ ಅಕೌಂಟ್​ಗೆ ಹಣ ವರ್ಗಾವಣೆ ಮಾಡುವುದರಿಂದ ಕೇಂದ್ರ ಸರ್ಕಾರಕ್ಕೆ ಉಳಿತಾಯವಾದ ಹಣವೆಷ್ಟು ಗೊತ್ತಾ?

|

Updated on: Aug 16, 2023 | 10:51 AM

Nirmala Sitharaman on DBT: ಕಳೆದ 9 ವರ್ಷದಿಂದ ನೇರ ಹಣ ವರ್ಗಾವಣೆ ವ್ಯವಸ್ಥೆ ಬಳಕೆಯಿಂದ ಕೇಂದ್ರ ಸರ್ಕಾರಕ್ಕೆ 2.73 ಲಕ್ಷಕೋಟಿ ರೂನಷ್ಟು ಹಣ ಉಳಿತಾಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಉಳಿತಾಯವಾದ ಹಣವನ್ನು ಇತರ ಯೋಜನೆಗಳಿಗೆ ಬಳಸಲು ಅನುಕೂಲವಾಗಿದೆ ಎಂದವರು ತಿಳಿಸಿದ್ದಾರೆ.

DBT Savings: ನೇರವಾಗಿ ಅಕೌಂಟ್​ಗೆ ಹಣ ವರ್ಗಾವಣೆ ಮಾಡುವುದರಿಂದ ಕೇಂದ್ರ ಸರ್ಕಾರಕ್ಕೆ ಉಳಿತಾಯವಾದ ಹಣವೆಷ್ಟು ಗೊತ್ತಾ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ಆಗಸ್ಟ್ 16: ಪಿಎಂ ಕಿಸಾನ್ ಸಮ್ಮಾನ್ ನಿಧಿ ಇತ್ಯಾದಿ ಯಾವುದೇ ಸರ್ಕಾರಿ ಯೋಜನೆಯಲ್ಲಿ ನೀಡಲಾಗುವ ಧನಸಹಾಯವು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಆಗುತ್ತದೆ. ಇದು ನೇರ ನಗದು ವರ್ಗಾವಣೆ ಅಥವಾ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ (DBT- Direct Benefit Transfer) ವಿಧಾನ. ಹಣ ಪೋಲಾಗದೇ ನಿರ್ದಿಷ್ಟ ಫಲಾನುಭವಿಗಳಿಗೆ ನೆರವು ಹೋಗಲು ಈ ಪದ್ಧತಿ ಬಹಳ ಸಹಾಯವಾಗುತ್ತದೆ. ಕೇಂದ್ರ ಸರ್ಕಾರ ಪ್ರತೀ ವರ್ಷ ಲಕ್ಷಾಂತರ ಕೋಟಿ ರೂನಷ್ಟು ಹಣವನ್ನು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೀಡುತ್ತದೆ. ಡಿಬಿಟಿ ವ್ಯವಸ್ಥೆಯಿಂದಾಗಿ ಬಹಳಷ್ಟು ಹಣ ಸೋರಿಕೆಯಾಗುವುದು ನಿಂತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಮಾಹಿತಿ ಪ್ರಕಾರ ಕಳೆದ 9 ವರ್ಷದಲ್ಲಿ ಡಿಬಿಟಿ ವಿಧಾನದಲ್ಲಿ 2.73 ಲಕ್ಷಕೋಟಿ ಹಣ ಅನಗತ್ಯವಾಗಿ ಪೋಲಾಗುವುದು ತಪ್ಪಿದೆಯಂತೆ.

ಆಗಸ್ಟ್ 15ರಂದು ದಿಶಾ ಭಾರತ್ ಎಂಬ ಸರ್ಕಾರೇತರ ಸಂಸ್ಥೆ (NGO) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಿರ್ಮಲಾ ಸೀತಾರಾಮನ್, ಡಿಬಿಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ಬಂದ ಬಳಿಕ ಕಳೆದ 9 ವರ್ಷದಲ್ಲಿ ಆಡಳಿತದ ಕಾರ್ಯಕ್ಷಮತೆ ಹೆಚ್ಚಿದೆ. ಸರ್ಕಾರಿ ಯೋಜನೆಗಳ ಅರ್ಹ ಫಲಾನುಭವಿಗಳನ್ನು ನಿಖರವಾಗಿ ತಲುಪಲು ಸಾಧ್ಯವಾಗಿದೆ. ಶಿಕ್ಷಣ, ಆರೋಗ್ಯ ಇತ್ಯಾದಿ ಕ್ಷೇತ್ರಗಳಿಗೆ ಹೆಚ್ಚು ಹಣ ವಿನಿಯೋಗಿಸುವ ಸಂಭಾವ್ಯತೆ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಸ್ಟಾರ್ಟಪ್​ಗೆ ಪೂರಕ ವಾತಾವರಣ; ಜಾಗತಿಕ ರ‍್ಯಾಂಕಿಂಗ್​ನಲ್ಲಿ ಬೆಂಗಳೂರಿಗೆ 8ನೇ ಸ್ಥಾನ

‘2014ರ ನಂತರ ಹಂತ ಹಂತವಾಗಿ ಹೆಚ್ಚೆಚ್ಚು ಯೋಜನೆಗಳಿಗೆ ಡಿಬಿಟಿ ವ್ಯವಸ್ಥೆ ಜೋಡಿಸಿದ್ದೇವೆ. ಇದರಿಂದ 2.73 ಲಕ್ಷಕೋಟಿ ರೂ ಉಳಿದಿದೆ. ಈ ಹಣವನ್ನು ಹಲವು ಇತರ ಯೋಜನೆಗಳಿಗೆ ಬಳಸಲು ಅನುಕೂಲವಾಗಿದೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಡಿಬಿಟಿ ವ್ಯವಸ್ಥೆಯಲ್ಲಿ ಮೂರು ಅಂಶಗಳಿವೆ. ಜನ್ ಧನ್ ಖಾತೆ, ಆಧಾರ್ ಮತ್ತು ಮೊಬೈಲ್ ನಂಬರ್ ಈ ಮೂರನ್ನು ಉಪಯೋಗಿಸಿ ಯೋಜನೆಯ ನಕಲಿ ಫಲಾನುಭವಿಗಳನ್ನು ತಡೆಗಟ್ಟಿ ಅರ್ಹರಿಗೆ ಹಣ ತಲುಪಲು ಸಾಧ್ಯವಾಗಿದೆ.

ಇದನ್ನೂ ಓದಿ: ನಿವೃತ್ತಿ ಬಳಿಕ ಆರೋಗ್ಯ ವಿಮಾ ಪಾಲಿಸಿ ಸಿಗುತ್ತದಾ? ಇನ್ಷೂರೆನ್ಸ್ ಮಾಡಿಸುವಾಗ ಎಚ್ಚರವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ನೇರ ಹಣ ವರ್ಗಾವಣೆ ಪದ್ಧತಿ ಮೊದಲು ಜಾರಿಗೆ ಬಂದಿದ್ದು 2013ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಈ ವ್ಯವಸ್ಥೆ ಸುಧಾರಣೆ ಕಾಣುತ್ತಾ ಹೋಗಿದೆ. ಇಲ್ಲಿಯವರೆಗೆ ಭಾರತದಲ್ಲಿ 100 ಕೋಟಿಗೂ ಹೆಚ್ಚು ಮಂದಿ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಹೊಂದಿದ್ದಾರೆ. 22 ಕೋಟಿ ಮಂದಿ ಜನ್ ಧನ್ ಖಾತೆ ಹೊಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ