ಎಫ್​ಡಿಗೆ ಶೇ. 9.10ರವರೆಗೂ ಬಡ್ಡಿ; ಈ ತಿಂಗಳು ಠೇವಣಿ ದರ ಹೆಚ್ಚಿಸಿದ 4 ಬ್ಯಾಂಕುಗಳು

FD Rates Updates: ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಈ ಆಗಸ್ಟ್ ತಿಂಗಳಲ್ಲಿ ತಮ್ಮಲ್ಲಿನ ಎಫ್​ಡಿಗಳಿಗೆ ಬಡ್ಡಿದರ ಪರಿಷ್ಕರಿಸಿವೆ. ಅದರ ವಿವರ ಇಲ್ಲಿದೆ....

ಎಫ್​ಡಿಗೆ ಶೇ. 9.10ರವರೆಗೂ ಬಡ್ಡಿ; ಈ ತಿಂಗಳು ಠೇವಣಿ ದರ ಹೆಚ್ಚಿಸಿದ 4 ಬ್ಯಾಂಕುಗಳು
ಬ್ಯಾಂಕ್

Updated on: Aug 17, 2023 | 2:48 PM

ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ಆಗಾಗ್ಗೆ ಬಡ್ಡಿದರಗಳನ್ನು (Interest Rates) ಪರಿಷ್ಕರಿಸುತ್ತಿರುತ್ತವೆ. ಬಹಳಷ್ಟು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಇಳಿಕೆಗೆ ಪೈಪೋಟಿ ನಡೆಸುತ್ತವೆ. ಹಾಗೆಯೇ, ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರ ಏರಿಕೆಗೂ ಪೈಪೋಟಿ ನಡೆಸುತ್ತವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳು ಎಫ್​ಡಿ ದರಗಳನ್ನು ಹೆಚ್ಚಿಸಿವೆ. ಈ ತಿಂಗಳು ಕೆಲ ಪ್ರಮುಖ ಬ್ಯಾಂಕುಗಳು ಎಫ್​ಡಿ ಬಡ್ಡಿದರ ಇಳಿಸಿದ್ದು ಅದರ ವಿವರ ಇಲ್ಲಿದೆ.

ಆ್ಯಕ್ಸಿಸ್ ಬ್ಯಾಂಕ್ ನಿಶ್ಚಿತ ಠೇವಣಿ ಬಡ್ಡಿದರ

ಎಕ್ಸಿಸ್ ಬ್ಯಾಂಕ್ ತನ್ನ 10 ವರ್ಷದವರೆಗಿನ ನಿಶ್ಚಿತ ಠೇವಣಿಗೆ ಶೇ. 8.05ರವರೆಗೂ ಬಡ್ಡಿ ವಿಧಿಸುತ್ತದೆ. ಹಿರಿಯ ನಾಗರಿಕರಿಗೆ ಬಡ್ಡಿದರ ಗರಿಷ್ಠ ಸಿಗುತ್ತದೆ. 2 ಕೋಟಿ ರೂ ಒಳಗಿನ 16-17 ತಿಂಗಳ ಅವಧಿಗೆ ಇರಿಸುವ ಎಫ್​ಡಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಇನ್ನು, ಇತರ ಸಾಮಾನ್ಯ ಗ್ರಾಹಕರಿಗೆ ಶೇ. 7.3ರವರೆಗೂ ಬಡ್ಡಿದರ ಸಿಗುತ್ತದೆ. ಆಗಸ್ಟ್ 14ರಂದು ಆ್ಯಕ್ಸಿಸ್ ಬ್ಯಾಂಕ್ ಈ ದರ ಪರಿಷ್ಕರಣೆ ಮಾಡಿದೆ.

ಕೆನರಾ ಬ್ಯಾಂಕ್ ಎಫ್​ಡಿ ದರ

ಕೆನರಾ ಬ್ಯಾಂಕ್ ತನ್ನ ಸಾಮಾನ್ಯ ಗ್ರಾಹಕರ ನಿಶ್ಚಿತ ಠೇವಣಿಗಳಿಗೆ ಶೇ. 4ರಿಂದ ಶೇ. 7.25ರಷ್ಟು ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇ. 0.5ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಆಗಸ್ಟ್ 12ರಂದು ಕೆನರಾ ಬ್ಯಾಂಕ್​ನ ನೂತನ ಬಡ್ಡಿದರ ಚಾಲನೆಗೆ ಬಂದಿತ್ತು.

ಇದನ್ನೂ ಓದಿ: ಸಾಲವೆಂಬ ಶೂಲಕ್ಕೆ ಏರಿಬಿಟ್ಟೀರಿ ಜೋಕೆ..! ಇಲ್ಲಿದೆ ಸಾಲಮುಕ್ತರನ್ನಾಗಿಸುವ ಟಿಪ್ಸ್

ಫೆಡರಲ್ ಬ್ಯಾಂಕ್ ಎಫ್​ಡಿ ದರ

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಫೆಡರಲ್ ಬ್ಯಾಂಕ್ ತನ್ನಲ್ಲಿನ ಫಿಕ್ಸೆಡ್ ಡೆಪಾಸಿಟ್​ಗಳ ಮೇಲೆ ಬಡ್ಡಿದರ ಹೆಚ್ಚಿಸಿದೆ. ಸಾಮಾನ್ಯ ಗ್ರಾಹಕರ 13 ತಿಂಗಳ ನಿಶ್ಚಿತ ಠೇವಣಿಗೆ ಬ್ಯಾಂಕು ಶೇ. 7.30ಯಷ್ಟು ಗರಿಷ್ಠ ಬಡ್ಡಿ ಕೊಡುತ್ತದೆ. ಇದೇ ಠೇವಣಿಗೆ ಹಿರಿಯ ನಾಗರಿಕರಿಗಾದರೆ ಶೇ. 8.07ರಷ್ಟು ಬಡ್ಡಿ ಸಿಗುತ್ತದೆ.

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್​ಡಿ ದರ

ದೇಶದ ಪ್ರಮುಖ ಸಣ್ಣ ಬ್ಯಾಂಕುಗಳಲ್ಲಿ ಒಂದಾದ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಎಫ್​ಡಿ ದರಗಳನ್ನು 85 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಿಸಿದೆ. ಆಗಸ್ಟ್ 7ರಿಂದಲೇ ಹೊಸ ದರ ಜಾರಿಗೆ ಬಂದಿದೆ. ಅದರ ಸಾಮಾನ್ಯ ಗ್ರಾಹಕರ ಎಫ್​ಡಿಗೆ ಶೇ. 8.60ರವರೆಗೂ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರ ಎಫ್​ಡಿಗಳಿಗೆ ಶೇ. 9.10ರವರೆಗೂ ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us